ಕಡಿಮೆ ಬೆಲೆಗೆ ಕಟ್ಟಡ ಮಾರಿಸಿದ್ದಕ್ಕೆ ಹತ್ಯೆ

| Published : Feb 09 2024, 01:47 AM IST / Updated: Feb 09 2024, 02:59 PM IST

Crime Murder

ಸಾರಾಂಶ

ಬೆಂಗಳೂರಿನ ಡಬಲ್‌ ಮರ್ಡರ್‌ ಸುದ್ದಿಗೆ ಕಾರಣ ತಿಳಿದುಬಂದಿದೆ. ತನಗೆ ಸೇರಿದ ಕಟ್ಟಡ ಕಡಿಮೆ ಬೆಲೆಗೆ ಮಾರಾಟ ಮಾಡಿಸಿದ ಎಂದು ಕೋಪದಲ್ಲಿ ಕೊಲೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಂಬಾರಪೇಟೆಯಲ್ಲಿ ಬುಧವಾರ ರಾತ್ರಿ ನಡೆದಿದ್ದ ಇಬ್ಬರು ವರ್ತಕರ ಜೋಡಿ ಕೊಲೆಗೆ ಕೌಟುಂಬಿಕ ಕಲಹ ಹಾಗೂ ₹70 ಲಕ್ಷ ಮೌಲ್ಯದ ಕಟ್ಟಡ ವಿವಾದ ಕಾರಣವಾಗಿವೆ ಎಂಬ ಸಂಗತಿ ಹಲಸೂರು ಗೇಟ್ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಇನ್ನು ದ್ವೇಷದ ಹಿನ್ನೆಲೆಯಲ್ಲಿ ಸುರೇಶ್‌ ಹತ್ಯೆಗೆ ಬಂದಿದ್ದ ಆರೋಪಿ ಭದ್ರಿ ಪ್ರಸಾದ್‌ ಕೈಗೆ ಅಚಾನಕ್ಕಾಗಿ ಸಿಕ್ಕಿ ಮಹೇಂದ್ರ ಸಹ ಬಲಿಯಾಗಿದ್ದಾರೆ. ಅಲ್ಲದೆ ಈ ಅವಳಿ ಕೊಲೆಗೆ ಕುಂಬಾರ ಸಂಘದ ಒಳ ರಾಜಕಾರಣವು ಸಹ ಪ್ರಚೋದಿಸಿದೆ ಎನ್ನಲಾಗಿದೆ.

ಕುಂಬಾರಪೇಟೆಯ ‘ಹರಿ ಮಾರ್ಕೆಟಿಂಗ್’ ಕಚೇರಿಯಲ್ಲಿ ತನ್ನ ಸೋದರ ಸಂಬಂಧಿ ಸುರೇಶ್ ಹಾಗೂ ಆತನ ಸ್ನೇಹಿತ ಮಹೇಂದ್ರ ಮೇಲೆ ಚಾಕುವಿನಿಂದ ದಾಳಿ ನಡೆಸಿ ರಾತ್ರಿ ಭೀಕರವಾಗಿ ಎಲೆಕ್ಟ್ರಿಕಲ್ ವ್ಯಾಪಾರಿ ಭದ್ರಿ ಕೊಲೆ ಮಾಡಿದ್ದ.

ಕೌಟುಂಬಿಕ ಕಲಹ-₹70 ಲಕ್ಷ ಗಲಾಟೆ: ಕುಂಬಾರಪೇಟೆಯಲ್ಲಿ ಕುಂಬಾರ ಸೇವಾ ಸದನಕ್ಕೆ ಸೇರಿದ ಕಟ್ಟಡದಲ್ಲಿ ‘ಭದ್ರಿ ಎಲೆಕ್ಟ್ರಿಕಲ್ಸ್’ ಹೆಸರಿನ ಮಳಿಗೆಯನ್ನು ಆರೋಪಿ ಭದ್ರಿ ಪ್ರಸಾದ್ ನಡೆಸುತ್ತಿದ್ದು, ಕೋರಮಂಗಲ ಸಮೀಪ ತನ್ನ ಕುಟುಂಬದ ಜತೆ ಆತ ನೆಲೆಸಿದ್ದ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಒಂದು ಮಹಡಿಯನ್ನು ₹70 ಲಕ್ಷಕ್ಕೆ ಆತನಿಗೆ ಕುಂಬಾರ ಸಂಘವು ನೀಡಿತ್ತು. 

ಇನ್ನು ಕುಂಬಾರ ಸಂಘದ ಚಟುವಟಿಕೆಯಲ್ಲಿ ಸಹ ಭದ್ರಿ ಪ್ರಸಾದ್ ಗುರುತಿಸಿಕೊಂಡಿದ್ದು, ಇದೇ ಸಂಘದ ಪದಾಧಿಕಾರಿಯಾಗಿದ್ದ ಸುರೇಶ್ ಜತೆ ಸಂಘದ ಆತಂರಿಕ ವಿಚಾರವಾಗಿ ಆತನಿಗೆ ವೈಮನಸ್ಸು ಮೂಡಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ತನ್ನ ಕೌಟುಂಬಿಕ ಕಲಹದಲ್ಲಿ ಸುರೇಶ್ ಪ್ರವೇಶಿಸಿದ್ದು ಭದ್ರಿಗೆ ಸಿಟ್ಟು ತರಿಸಿತು. ಕೊನೆಗೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಭದ್ರಿಯಿಂದ ಆತನ ಪತ್ನಿ ಹಾಗೂ ಮಕ್ಕಳು ಪ್ರತ್ಯೇಕವಾಗಿದ್ದರು. 

ಈ ಬೆಳವಣಿಗೆ ಹಿಂದೆ ಸುರೇಶ್ ಕುಮ್ಮಕ್ಕು ಇದೆ ಎಂದು ಭಾವಿಸಿ ಆರೋಪಿ ಕೋಪಗೊಂಡಿದ್ದ. ಹೀಗಿರುವಾಗ ಕುಂಬಾರಪೇಟೆಯಲ್ಲಿ ಭದ್ರಿ ನೀಡಲಾಗಿದ್ದ ಕಟ್ಟಡದ ಮಳಿಗೆಯನ್ನು ಆತನ ವಿಚ್ಛೇದಿತ ಪತ್ನಿಗೆ ಕುಂಬಾರ ಸಂಘವು ಮರು ಹಂಚಿಕೆ ಮಾಡಿತ್ತು. ಆನಂತರ ಆ ಮಳಿಗೆಯನ್ನು ಬೇರೊಬ್ಬರಿಗೆ ₹30 ಲಕ್ಷಕ್ಕೆ ಸುರೇಶ್ ಮಾರಾಟ ಮಾಡಿಸಿದ್ದ.

ಇದರಿಂದ ನನಗೆ ಹಾಗೂ ನನ್ನ ಪತ್ನಿ ಮತ್ತು ಮಕ್ಕಳಿಗೆ ಸುರೇಶ್ ಸುಮಾರು ₹40 ಲಕ್ಷ ಮೋಸ ಮಾಡಿದ್ದಾನೆ ಎಂದು ಭದ್ರಿ ಆರೋಪಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಆತ, ಕೊನೆಗೆ ಸುರೇಶ್ ಕೊಲೆಗೆ ನಿರ್ಧಸಿದ್ದ. ಅಂತೆಯೇ ಬುಧವಾರ ರಾತ್ರಿ ಹರಿ ಮಾರ್ಕೆಂಟ್‌ ಕಚೇರಿಯಲ್ಲಿ ಸುರೇಶ್ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಭದ್ರಿ ನುಗ್ಗಿದ್ದಾನೆ.

 ಆ ವೇಳೆ ಅಲ್ಲೇ ಇದ್ದ ಮಹೇಂದ್ರ ಜತೆ ಸಹ ಆರೋಪಿಗೆ ಜಗಳವಾಗಿದೆ. ಬಳಿಕ ಇಬ್ಬರಿಗೂ ಚಾಕುವಿನಿಂದ ಇರಿದು ಭದ್ರಿ ಭೀಕರವಾಗಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮೂಕ ಪ್ರೇಕ್ಷಕರಾದ ಜನರು

ಅವಳಿ ಹತ್ಯೆ ಕೃತ್ಯದ ಆರೋಪಿ ಕೈಯಲ್ಲಿ ಚಾಕು ಹಿಡಿದು ಅಬ್ಬರಿಸುವಾಗ ಸ್ಥಳೀಯ ಜನರು ಮೂಕ ಪ್ರೇಕ್ಷಕರಾಗಿದ್ದರು. ‘ನನ್ನ ಸಂಸಾರ ಹಾಳು ಮಾಡಿದ. ನನ್ನ ಹೆಂಡ್ತಿ ಮಕ್ಕಳನ್ನು ಬೀದಿಗೆ ತಳ್ಳಿದ್ರು’ ಎಂದು ಆಕ್ರೋಶ ವ್ಯಕ್ತಪಡಿಸಿ ಮಹೇಂದ್ರ ಅವರಿಗೆ ಚಾಕುವಿನಿಂದ ಇರಿದು ಭದ್ರಿ ಕೂಗಾಡುವ ವಿಡಿಯೋ ವೈರಲ್ ಆಗಿದೆ.