ಸಾರಾಂಶ
ಮಾನಸಿಕ ಅಸ್ವಸ್ಥ ಯುವಕ ಭಾನುವಾರ ಬೆಳಗ್ಗೆ 9.30ರ ಸಮಯದಲ್ಲಿ ತನ್ನ ಹುಚ್ಚಾಟದಿಂದ ಪಿಎಸ್ಎಸ್ಕೆ ಕಾರ್ಖಾನೆ ಬಳಿಯ ರೈಲ್ವೆ ನಿಲ್ದಾಣದ ಮೇಲ್ಸೇತುವೆಯಿಂದ ಜಿಗಿದು ವಿದ್ಯುತ್ ತಂತಿ ನಡುವೆ ಸಿಲುಕಿ ಕೊಂಡಿದ್ದಾನೆ. ಈ ಸಮಯದಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಪಾಂಡವಪುರ : ಮಾನಸಿಕ ಅಸ್ವಸ್ಥ ಯುವಕ ಆತ್ಮಹತ್ಯೆಗೆ ವಿಫಲ ಪ್ರಯತ್ನ ನಡೆಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ನಡೆದಿದೆ.ಉತ್ತರ ಕರ್ನಾಟಕ ಮೂಲದ ಸುಮಾರು 28 ವರ್ಷದ ಮಾನಸಿಕ ಅಸ್ವಸ್ಥ ಯುವಕ ಭಾನುವಾರ ಬೆಳಗ್ಗೆ 9.30ರ ಸಮಯದಲ್ಲಿ ತನ್ನ ಹುಚ್ಚಾಟದಿಂದ ಪಿಎಸ್ಎಸ್ಕೆ ಕಾರ್ಖಾನೆ ಬಳಿಯ ರೈಲ್ವೆ ನಿಲ್ದಾಣದ ಮೇಲ್ಸೇತುವೆಯಿಂದ ಜಿಗಿದು ವಿದ್ಯುತ್ ತಂತಿ ನಡುವೆ ಸಿಲುಕಿ ಕೊಂಡಿದ್ದಾನೆ.
ಈ ಸಮಯದಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಬಳಿಕ ವಿದ್ಯುತ್ ತಂತಿ ಹಿಡಿದು ನೇತಾಡಿಕೊಂಡು ಕೆಳಗೆ ಜಿಗಿದಿದ್ದಾನೆ. ಆಗಲೂ ಯಾವುದೇ ಪ್ರಾಣಾಯಪಾಯವಿಲ್ಲದೆ ಬದುಕುಳಿದಿದ್ದ.
ನಂತರ ಆ ವ್ಯಕ್ತಿ ಪಿಎಸ್ಎಸ್ಕೆ ಶಾಲೆ ಕಾಪೌಂಡ್ ಪಕ್ಕದಲ್ಲಿ ಇದ್ದ ಎಳನೀರು ವ್ಯಾಪಾರಿ ಬಳಿ ಬಂದು ಮಚ್ಚು ಕಸಿದು ರಂಪಾಟ ನಡೆಸಿದ್ದಾನೆ. ನಂತರ ಮಚ್ಚಿನಿಂದ ಕುತ್ತಿಗೆ ಕೂಯ್ದುಕೊಂಡಿದ್ದಾನೆ. ಯುವಕ ಹುಚ್ಚಾಟವನ್ನು ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.
ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಯುವಕನ್ನು ಸಾರ್ವಜನಿಕರ ದೂರಿನ ಮೇರೆ ಪೊಲೀಸರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಂಡಕ್ಕೆ ಬಿದ್ದು ಗಾಯಗೊಂಡಿದ್ದ ಗುಡ್ಡಪ್ಪ ಸಾವು
ಮಂಡ್ಯ: ಕೊಂಡೋತ್ಸವದ ವೇಳೆ ಬಿದ್ದು ಗಾಯಗೊಂಡಿದ್ದ ದೇವರ ಗುಡ್ಡಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾರಸವಾಡಿಯಲ್ಲಿ ನಡೆದಿದೆ.ಗ್ರಾಮದ ಮಹದೇವು ಮೃತ ಗುಡ್ಡಪ್ಪ. ಕಳೆದ ಏಪ್ರಿಲ್ 21ರಂದು ಗ್ರಾಮದಲ್ಲಿ ಬೋರೇದೇವರ ಕೊಂಡೋತ್ಸವದ ವೇಳೆ ಕೆಂಡಕ್ಕೆ ಬಿದ್ದಿದ್ದ ಗುಡ್ಡಪ್ಪ ಮಹದೇವು ಗಂಭೀರವಾಗಿಯ ಗಾಯಗೊಂಡಿದ್ದರು.
ನಂತರ ಇವರನ್ನು ಮಂಡ್ಯದಲ್ಲಿ ಚಿಕಿತ್ಸೆಗೆ ದಾಖಲಿಸಿದ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುಡ್ಡಪ್ಪ ಮಹದೇವು ಮೃತಪಟ್ಟಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.