ಸಾರಾಂಶ
ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯ ಬ್ಯಾಡರಹಳ್ಳಿ ಬಳಿ ಕೆಪಿಟಿಸಿಎಲ್ನ 66/11 ಕೆ.ವಿ. ಸಾಮರ್ಥ್ಯದ ಪ್ರಮುಖ ವಿದ್ಯುತ್ ಮಾರ್ಗದಲ್ಲಿ ತಂತಿ ತುಂಡಾಗಿದ್ದು, ಪರಿಣಾಮ ಸುತ್ತಮುತ್ತಲಿನ ಮೂರು ಬೆಸ್ಕಾಂ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಗುರುವಾರ ಸಂಜೆಯಿಂದ ವಿದ್ಯುತ್ ಸ್ಥಗಿತಗೊಂಡಿದೆ.
ಗುರುವಾರ ಸಂಜೆ 5.39 ಗಂಟೆಗೆ ಬೃಹತ್ ವಿದ್ಯುತ್ ಮಾರ್ಗದ ತಂತಿ ತುಂಡಾಗಿ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ತಂತಿ ತುಂಡಾದ ತಕ್ಷಣ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದು, ಇದರಿಂದ ಸಂಭವನೀಯ ಹಾನಿ ತಪ್ಪಿದೆ ಎಂದು ತಿಳಿದುಬಂದಿದೆ.
ಇನ್ನು ಬ್ಯಾಡರಹಳ್ಳಿ ಪೀಣ್ಯದ ಪ್ರಮುಖ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಬೆಸ್ಕಾಂನ 12 ಫೀಡರ್ ಮಾರ್ಗಗಳಿಗೆ ವಿದ್ಯುತ್ ಪೂರೈಕೆ ಇಲ್ಲದಂತಾಗಿದೆ. ಬರೋಬ್ಬರಿ 73 ಮೆ.ವ್ಯಾಟ್ ವಿದ್ಯುತ್ ಪೂರೈಕೆ ನಿಂತಿದ್ದು, ಬ್ಯಾಡರಹಳ್ಳಿ, ಕೊಡಿಗೆಹಳ್ಳಿ, ಶ್ರೀಗಂಧ ಕಾವಲ್ ಉಪ ಕೇಂದ್ರಗಳ ವ್ಯಾಪ್ತಿಯ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಇಲ್ಲದಂತಾಗಿದೆ.
ಒತ್ತಡ ಹೆಚ್ಚಾಗಿ ತಂತಿ ಕಟ್?:
ಈ ಬಗ್ಗೆ ಕನ್ನಡಪ್ರಭಕ್ಕೆ ಮಾಹಿತಿ ನೀಡಿರುವ ಕೆಪಿಟಿಎಸ್ ಅಧಿಕಾರಿಯೊಬ್ಬರು, ಈ ಭಾಗದಲ್ಲಿ 66/11 ಕೆ.ವಿ. ಮಾರ್ಗದ ಮೇಲೆ ಹೆಚ್ಚು ಒತ್ತಡ ಇದೆ. 2016ರಿಂದಲೂ ಈ ಮಾರ್ಗ ಸೇವೆಯಲ್ಲಿದ್ದು, ಲೋಡ್ ಹೆಚ್ಚಾಗಿ ಆಗಾಗ ಶಾರ್ಟ್ ಆಗುತ್ತಿತ್ತು. ಈ ಭಾಗದಲ್ಲಿ ಚಿಕನ್ ತ್ಯಾಜ್ಯ ಮತ್ತಿತರ ಕಾರಣಗಳಿಗೆ ಹದ್ದುಗಳ ಹಾರಾಟ ಹೆಚ್ಚು. ಹೀಗಾಗಿ ಶಾರ್ಟ್ ಆಗುತ್ತಿರುತ್ತದೆ. ಇದರಿಂದ ತಂತಿ ಸೊರಗಿ ತುಂಡಾಗಿರಬಹುದು ಎಂದು ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ ವೇಳೆಗೆ ವಿದ್ಯುತ್?:
ಸಂಜೆ 6.30 ಗಂಟೆ ವೇಳೆಗೆ ಕೆಟಿಪಿಸಿಎಲ್ ಸಿಬ್ಬಂದಿ ಸ್ಥಳಕ್ಕೆ ಸೇರಿದ್ದು, ಸ್ಪೆಷಲ್ ಕಂಡಕ್ಟರ್ ಆಗಿರುವುದರಿಂದ ಟೂಲ್ಸ್ ತರಿಸಲಾಗುತ್ತಿದೆ. ಕೈಗಾರಿಕಾ ಪ್ರದೇಶ ಆಗಿರುವುದರಿಂದ ಶುಕ್ರವಾರ ಬೆಳಗ್ಗೆ ಕೈಗಾರಿಕೆಗಳ ಕಾರ್ಯಾಚರಣೆ ವೇಳೆಗೆ ವಿದ್ಯುತ್ ಪೂರೈಕೆ ಮಾಡಲೇಬೇಕು. ಹೀಗಾಗಿ ಎಷ್ಟೇ ಹೊತ್ತಾದರೂ ಶುಕ್ರವಾರದ ಬೆಳಗ್ಗೆ ವೇಳೆಗೆ ವಿದ್ಯುತ್ ಪೂರೈಸುತ್ತೇವೆ. ನಾಗರಭಾವಿ ವಿದ್ಯುತ್ ಕೇಂದ್ರ ಸೆಪ್ಟೆಂಬರ್ ವೇಳೆಗೆ ಕಾರ್ಯಾರಂಭವಾಗಲಿದ್ದು, ಇದಾದರೆ ಒತ್ತಡ ಕಡಿಮೆಯಾಗಲಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.