ವಾಲಿಬಾಲ್ ಆಟದ ವಿಚಾರದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಶಾಲೆಯ ಕ್ಯಾಂಪಸ್ ನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ವಾಲಿಬಾಲ್ ಆಟದ ವಿಚಾರದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಸೋಮನಹಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಶಾಲೆಯ ಕ್ಯಾಂಪಸ್ ನಲ್ಲಿ ನಡೆದಿದೆ.

ತಾಲೂಕಿನ ಆಲೂರು ಗ್ರಾಮದ ಸಂಪತ್ ಕುಮಾರ್ ಪುತ್ರ ಸಮಂತ್ ಗೌಡ (16) ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಈತನಿಗೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಎಟ್ರಿಯಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಮಂತಗೌಡ ಪ್ರಜ್ಞಾ ಶೂನ್ಯನಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಜಿಟಿಡಿಸಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಮದನ್, ಪ್ರಾಧ್ಯಾಪಕ ಕೃಷ್ಣ, ವಿದ್ಯಾರ್ಥಿಗಳಾದ ಶಶಾಂಕ್, ಉತ್ತಮ್ ಚಂದ್, ಯಶವಂತಗೌಡ ಹಾಗೂ ಪುನೀತ್ ಎಂಬುವವರುಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಸೋಮನಹಳ್ಳಿಯ ಜಿಟಿಡಿಸಿ ಕಾಲೇಜಿನಲ್ಲಿ ಗಾಯಾಳು ಸಮಂತ್ ಗೌಡನ ಸ್ನೇಹಿತರಾದ ಪ್ರಜ್ವಲ್ ಮತ್ತು ರವಿತೇಜ ಹೇಳಿಕೆ ಪ್ರಕಾರ ಕಳೆದ ಜುಲೈ20 ರಂದು ಕಾಲೇಜಿನ ಕೊಠಡಿಯಲ್ಲಿ ವಾಲಿಬಾಲ್ ಆಟದಲ್ಲಿ ಹಿರಿಯ ವಿದ್ಯಾರ್ಥಿಗಳ ಗುಂಪು ಗೆಲವು ಸಾಧಿಸಿದ್ದ ಹಿನ್ನೆಲೆಯಲ್ಲಿ ಸಮಂತ್ ಗೌಡ ಹಾಗೂ ಹಿರಿಯ ವಿದ್ಯಾರ್ಥಿಗಳ ಗುಂಪಿನ ನಡುವೆ ಸಣ್ಣ ಪ್ರಮಾಣದ ಗಲಾಟೆ ನಡೆದಿತ್ತು.

ಅದಾದ ನಂತರ ಕಾಲೇಜು ಮುಂಭಾಗದಲ್ಲಿ ಆರೋಪಿಗಳು ಸಮಂತ್ ಗೌಡ ಗುಂಪಿನ ನಡುವೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸಂಜೆ ಕಾಲೇಜು ಮುಂಭಾಗದಲ್ಲಿ ಮತ್ತೆ ಆರೋಪಿಗಳ ಪೈಕಿ ಶಶಾಂಕ್, ಉತ್ತಮ್ ಚಂದ್, ಯಶವಂತೆ ಗೌಡ ಮತ್ತು ಪುನೀತ್ ಅವರುಗಳು ಸಮಂತ್ ಗೌಡನ ಮೇಲೆ ಹಲ್ಲೆ ನಡೆಸಿದ ಪರಿಣಾಮ ನೆಲದ ಮೇಲೆ ಬಿದ್ದು ಸಮಂತನ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ರಕ್ತಸ್ರಾವದ ಕಾರಣ ರಕ್ತ ಹೆಪ್ಪುಗಟ್ಟಿ ಪ್ರಜ್ಞ ಶೂನ್ಯನಾಗಿದ್ದಾನೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಪ ಮಾಡಲಾಗಿದೆ. ತಲೆ ಚಿಪ್ಪು ಹೊರಬಂದಿದ್ದು, ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ ಎಂದು ತಂದೆ ಸಂಪತ್ ಕುಮಾರ್ ತಿಳಿಸಿದ್ದಾರೆ.

ಮದ್ದೂರು ಪೊಲೀಸರು ಆರೋಪಿಗಳ ವಿರುದ್ಧ ಬಿ ಎನ್ಎಸ್ ಕಾಯ್ದೆ109 ಹಾಗೂ 190 ರಅನ್ವಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.