ಸಾರಾಂಶ
ದೇವಿದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಹಾಸ್ಯ ಪ್ರಧಾನ ಚಿತ್ರ ಪುರುಷೋತ್ತಮನ ಪ್ರಸಂಗಗಳು.
ಕನ್ನಡಪ್ರಭ ಸಿನಿವಾರ್ತೆ
ಜನಪ್ರಿಯ ತುಳು ಕಲಾವಿದ ಡಾ. ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡ ಸಿನಿಮಾ ‘ಪುರುಷೋತ್ತಮನ ಪ್ರಸಂಗ’. ಕೆನಡಾದಲ್ಲಿ ನಟನೆಯ ಪಾಠ ಕಲಿತು ಬಂದಿರುವ ಅಜಯ್ ಪೃಥ್ವಿ ನಾಯಕ. ರಿಷಿಕಾ ನಾಯಕ್ ನಾಯಕಿ.ಈ ಸಿನಿಮಾದ ಬಗ್ಗೆ ವಿವರ ನೀಡಿದ ದೇವಿದಾಸ್ ಕಾಪಿಕಾಡ್, ‘ಆಕಸ್ಮಿಕವಾಗಿ ನಿರ್ಮಾಪಕರಿಂದ ಕನ್ನಡ ಸಿನಿಮಾ ನಿರ್ದೇಶಿಸುವ ಅವಕಾಶ ಸಿಕ್ಕಿತು. ಭಯ ಆಯ್ತು. ಅವರೇ ಧೈರ್ಯ ಕೊಟ್ಟರು. ಜೊತೆಗೆ ಮುಗ್ಧ ಬಾಲಕನನ್ನು ನನ್ನ ಕೈಗೆ ಕೊಟ್ಟರು. ಆತನೇ ಈ ಸಿನಿಮಾದ ಹೀರೋ. ಇದು ನೈಜ ಘಟನೆ ಆಧರಿತ ಕೌಟುಂಬಿಕ ಮನರಂಜನಾ ಚಿತ್ರ. ಕರಾವಳಿ ಭಾಗದ ಕಥೆ ಇದೆ. ಫೆ.16ಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ. ನಾನು ಒಂದು ಪಾತ್ರದಲ್ಲಿ ನಟಿಸಿದ್ದೇನೆ. ಖ್ಯಾತ ತುಳು ರಂಗ ಕಲಾವಿದರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ನಟಿಸಿದ್ದಾರೆ’ ಎಂದರು. ನಾಯಕ ಅಜಯ್ ಪೃಥ್ವಿ, ‘ಐದನೇ ಕ್ಲಾಸಿನಿಂದಲೇ ಸಿನಿಮಾದಲ್ಲಿ ನಟಿಸುವ ಕನಸಿತ್ತು. ಈ ಚಿತ್ರಕ್ಕಾಗಿ ಮಂಗಳೂರು ಉಚ್ಛರಣೆ ಕಲಿಯುವುದು ಸವಾಲಾಗಿತ್ತು’ ಎಂದರು. ನಾಯಕಿ ರಿಷಿಕಾ ನಾಯಕ್ ಇಂಜಿನಿಯರಿಂಗ್ ಮುಗಿಸಿ ಚಿತ್ರರಂಗಕ್ಕೆ ಬಂದಿದ್ದಾರೆ. ರವಿ ಕುಮಾರ್ ಹಾಗೂ ಸಂಶುದ್ದೀನ್ ನಿರ್ಮಾಪಕರು. ತುಳು ಚಿತ್ರ ನಿರ್ಮಾಪಕಿ ಶರ್ಮಿಳಾ ಕಾಪಿಕಾಡ್ ಉಪಸ್ಥಿತರಿದ್ದರು.