ಸಾರಾಂಶ
ಸಿನಿವಾರ್ತೆ
‘ಕುಮಾರವ್ಯಾಸ ಭಾರತದ ಮೊದಲ ಸ್ಕ್ರಿಪ್ಟ್ ರೈಟರ್. ಆತನೇ ಮೊಟ್ಟ ಮೊದಲ ನಿರ್ದೇಶಕ. ಅವನ ಕಾವ್ಯ ವರ್ಣನೆ ಮುಂದೆ ಯಾವ ಬಾಹುಬಲಿ ಸಿನಿಮಾವೂ ಇಲ್ಲ.’
ಹೀಗೆಂದವರು ಸಾಹಿತಿ ಎಲ್ ಎನ್ ಮುಕುಂದರಾಜ್. ತಾನು ಮುಂದಿನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಂದೂ ಅವರು ಈ ವೇಳೆ ಘೋಷಿಸಿಕೊಂಡರು. ಶಿವರಾಮ್ ನಿರ್ಮಾಣದ, ಅರುಣ್ ಮಾನವ್ ನಿರ್ದೇಶನದ, ಧರ್ಮ ಕೀರ್ತಿರಾಜ್, ಕೃಷಿ ತಪಂಡ ನಟನೆಯ ‘ಜಾಸ್ತಿ ಪ್ರೀತಿ’ ಸಿನಿಮಾ ಟೀಸರ್ ಈ ವೇಳೆ ಅನಾವರಣಗೊಂಡಿತು.
‘ತಮಿಳು, ಮಲಯಾಳಂ ಭಾಷೆಯಲ್ಲೆಲ್ಲ ಚಿತ್ರಕಥೆ ಬರೆಯುವವರು ತಮ್ಮ ಭಾಷೆಯ ಸಾಹಿತ್ಯ ಚರಿತ್ರೆ ಓದಿಕೊಂಡಿರುತ್ತಾರೆ. ಆ ತಳಹದಿಯಿಂದಾಗಿ ಅಲ್ಲಿ ಗ್ರೇಟ್ ಸಿನಿಮಾಗಳೂ ಹುಟ್ಟುತ್ತವೆ. ನಮ್ಮಲ್ಲೂ ಆ ಪರಂಪರೆ ಬೆಳೆಯಬೇಕು’ ಎಂದು ಮುಕುಂದರಾಜ್ ಹೇಳಿದರು.
ನಾಯಕ ಧರ್ಮ ಕೀರ್ತಿರಾಜ್, ‘ಜನ ಥಿಯೇಟರ್ಗೆ ಬರಲ್ಲ ಎಂದು ಉಳಿದ ನಿರ್ಮಾಪಕರು ಅಂಜಿಕೆಯಿಂದ ಇರುವಾಗ ನಮ್ಮ ನಿರ್ಮಾಪಕರು ಧೈರ್ಯದಿಂದ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಅವರ ನಂಬಿಕೆ ದೊಡ್ಡದು. ಸಾಕಷ್ಟು ಸಮಯದಿಂದ ಬ್ರೇಕ್ ಸಿಗಬೇಕು ಎಂದು ಒದ್ದಾಡುತ್ತಿದ್ದೇನೆ. ಯಾವ ಸಿನಿಮಾದಿಂದ ಗೆಲುವು ಸಿಗುತ್ತೆ ಅನ್ನೋದು ಗೊತ್ತಿಲ್ಲ’ ಎಂದು ಖುಷಿ, ಬೇಸರ ಬೆರೆಸಿ ಮಾತನಾಡಿದರು.
ನಿರ್ದೇಶಕ ಅರುಣ್ ಮಾನವ್, ‘ಕೆಲವು ವರ್ಷಗಳ ಹಿಂದೆ ಫೇಸ್ಬುಕ್ ಸ್ಕ್ರೋಲ್ ಮಾಡುತ್ತಿದ್ದೆ. ಅಲ್ಲೊಂದು ಫೋಟೋ ನೋಡಿ ನನ್ನ ಕರುಳು ಚುರುಕ್ ಎಂದಿತು. ಆಗಲೇ ಈ ಸಿನಿಮಾ ಕಥೆಯೂ ಹುಟ್ಟಿತು’ ಎಂದರು.