ನವದೆಹಲಿ : ‘ಪ್ರತಿಯೊಬ್ಬ ನಾಗರಿಕರ ಜೀವ ಅಮೂಲ್ಯವಾದದ್ದು. ಹಾಗಾಗಿ ಉಪವಾಸನಿರತ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರ ಜೀವ ಉಳಿಸಲು ಯಾವ ಕ್ರಮವನ್ನಾದರೂ ಕೈಗೊಳ್ಳಿ’ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ವಾಂಗ್ಚುಕ್ 19 ದಿನದಿಂದ ಉಪವಾಸ
ನೀಟ್ ವೈಫಲ್ಯ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಜಿರಳೆ ಪಾರ್ಟಿ ಹೋರಾಟದಲ್ಲಿ ವಾಂಗ್ಚುಕ್ 19 ದಿನದಿಂದ ಉಪವಾಸ ಮಾಡುತ್ತಿದ್ದಾರೆ. ‘19 ದಿನಗಳಿಂದ ಉಪವಾಸ ಕೈಗೊಂಡಿರುವ ವಾಂಗ್ಚುಕ್ ಇನ್ನೆರೆಡು ದಿನಗಳಲ್ಲಿ ಸಾಯಬಹುದು. ಹಾಗಾಗಿ ಅವರಿಗೆ ಬಲವಂತವಾಗಿ ಆದರೂ ಆಹಾರ ನೀಡಬೇಕು’ ಎಂದು ದೆಹಲಿ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
ಯಾವುದೇ ನಾಗರಿಕರ ಜೀವವು ಅಮೂಲ್ಯ
‘ಯಾವುದೇ ನಾಗರಿಕರ ಜೀವವು ಅಮೂಲ್ಯವಾದದ್ದು. ಅದನ್ನು ಉಳಿಸಲು ಅಧಿಕಾರಿಗಳು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಸೋನಂ ವಾಂಗ್ಚುಕ್ ಅವರ ಜೀವವನ್ನು ಉಳಿಸಲು ಅಗತ್ಯವಿರುವ ಯಾವುದೇ ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದಿದೆ. ಇದೇ ಸಂದರ್ಭದಲ್ಲಿ ಸೋನಂ ವೈದ್ಯಕೀಯ ಮೇಲ್ವಿಚಾರಣೆ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವುದು ಗಮನಿಸಿದ ನ್ಯಾಯಾಲಯ ‘ ಸೋನಂ ಅವರಿಗೆ ಸರ್ಕಾರಿ ವೈದ್ಯರಿಂದ ನಿಯಮತ ಮತ್ತು ದೈನಂದಿನ ವೈದ್ಯಕೀಯ ತಪಾಸಣೆಗಳು ನಡೆಸಬೇಕು. ಆ ವರದಿಗಳ ಆಧಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಬೇಕು’ ಎಂದು ಸೂಚನೆ ನೀಡಿತು.
ಆಗ ಸರ್ಕಾರಿ ವಕೀಲರು, ‘ಖಾಸಗಿ ಹಾಗೂ ಸರ್ಕಾರಿ ವೈದ್ಯರಿಬ್ಬರೂ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ವೈದ್ಯರ ಶಿಫಾರಸಿನಂತೆ ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದರು. ಅರ್ಜಿ ವಿಚಾರಣೆ ವೇಳೆ ಅರ್ಜಿದಾರರು, ‘ಸಾರ್ವಜನಿಕ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕು. ಆದರೆ ಈ ರೀತಿಯಾಗಿ ವಾಂಗ್ಚುಕ್ ಸಾವನ್ನಪ್ಪಿದ್ದರೆ ಅದು ದೇಶ ಮತ್ತು ಜಗತ್ತಿಗೆ ಅವಮಾನಕಾರಿ ಸಂಗತಿ’ ಎಂದು ಕೋರ್ಟ್ ಗಮನಕ್ಕೆ ತಂದರು.