ಸಾರಾಂಶ
ಪಿಟಿಐ ನವದೆಹಲಿ
ಮುಂಬರುವ ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ತಯಾರಿಸಲು ಕಾಂಗ್ರೆಸ್ ಪಕ್ಷ ಜನರಿಂದ ಸಲಹೆಗಳನ್ನು ಆಹ್ವಾನಿಸಿದೆ. ಅದಕ್ಕಾಗಿ ಪ್ರತ್ಯೇಕ ವೆಬ್ಸೈಟ್ awaazbharatki.in ಆರಂಭಿಸಿದೆ.
awaazbharatki@inc.in ಗೆ ಇ-ಮೇಲ್ ಕಳುಹಿಸುವ ಮೂಲಕವೂ ಜನರು ಸಲಹೆ ನೀಡಬಹುದಾಗಿದೆ.ಬುಧವಾರ ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ.ಚಿದಂಬರಂ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
‘ವೆಬ್ಸೈಟ್ ಹಾಗೂ ಇ-ಮೇಲ್ ಮೂಲಕ ಸಲಹೆಗಳನ್ನು ಆಹ್ವಾನಿಸುವುದರ ಜೊತೆಗೆ ಪಕ್ಷವು ನೇರವಾಗಿ ಜನರ ಬಳಿಗೆ ಹೋಗಿ ಸಮಾವೇಶಗಳನ್ನು ನಡೆಸಿ ಸಲಹೆ ಪಡೆಯಲಿದೆ.
ಲೋಕಸಭೆ ಚುನಾವಣೆಗೆ ಮುನ್ನ ನಾವು ಪ್ರಕಟಿಸುವುದು ‘ಜನರ ಪ್ರಣಾಳಿಕೆ’ ಆಗಿರಲಿದೆ ಎಂದು ಹೇಳಿದರು.
ವೆಬ್ಸೈಟ್ ಹಾಗೂ ಇ-ಮೇಲ್ ಮೂಲಕ ಯಾರು ಬೇಕಾದರೂ ಸಲಹೆಗಳನ್ನು ನೀಡಬಹುದು. ಉತ್ತಮ ಸಲಹೆಗಳನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು.
ಅಧಿಕಾರಕ್ಕೆ ಬಂದರೆ ಅವುಗಳನ್ನು ಜಾರಿಗೊಳಿಸಲಾಗುವುದು.
ಸಲಹೆ ಸ್ವೀಕರಿಸುವುದಕ್ಕೆ ಪ್ರತಿ ರಾಜ್ಯದಲ್ಲೂ ಕನಿಷ್ಠ ಒಂದು ಸಮಾವೇಶ ಏರ್ಪಡಿಸಲಾಗುವುದು. ಕೆಲ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಸಮಾವೇಶ ಏರ್ಪಡಿಸಲಾಗುವುದು.
ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳಿಗೆ ಆಸಕ್ತಿಯಿದ್ದರೆ ಅವೂ ಕೂಡ ಸಮಾವೇಶಕ್ಕೆ ಕೈಜೋಡಿಸಬಹುದು ಎಂದು ಚಿದಂಬರಂ ತಿಳಿಸಿದರು.