ಸಕ್ಕರೆ ಸೇವನೆ ಕಡಿಮೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮನವಿ ಮಾಡಿದರು. ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಭಾಷಣ ಮಾಡಿದ ಅವರು, ‘ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಅಡುಗೆ ಎಣ್ಣೆಯ ಬಳಕೆಯನ್ನು ಶೇ.10ರಷ್ಟು ಕಡಿತಗೊಳಿಸಿ.

ನವದೆಹಲಿ: ಸಕ್ಕರೆ ಸೇವನೆ ಕಡಿಮೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಮನವಿ ಮಾಡಿದರು.

ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಭಾಷಣ ಮಾಡಿದ ಅವರು, ‘ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಅಡುಗೆ ಎಣ್ಣೆಯ ಬಳಕೆಯನ್ನು ಶೇ.10ರಷ್ಟು ಕಡಿತಗೊಳಿಸಿ. ಇಂತಹ ಸಣ್ಣ ಪ್ರಯತ್ನಗಳು ಬೊಜ್ಜು ಮತ್ತು ಜೀವನಶೈಲಿ ಕಾಯಿಲೆಗಳಿಂದ ದೂರವಿಡುತ್ತವೆ’ ಎಂದು ಕರೆ ನೀಡಿದರು.

ಆಫ್ರಿಕಾ ಯೋಗ ಗುರುವಿಗೆ ಪ್ರಶಂಸೆ:

‘ಅಂತಾರಾಷ್ಟ್ರೀಯ ಯೋಗ ದಿನಕ್ಕೆ 100 ದಿನಗಳಿಗಿಂತ ಕಡಿಮೆ ಸಮಯ ಉಳಿದಿದೆ. ಪ್ರಪಂಚದಾದ್ಯಂತ ಯೋಗದತ್ತ ಜನರ ಆಕರ್ಷಣೆ ನಿರಂತರವಾಗಿ ಹೆಚ್ಚುತ್ತಿದೆ. ಅಲ್ಮಿಸ್ ಜಿ ಆಫ್ರಿಕಾದ ಜಿಬೌಟಿಯಲ್ಲಿರುವ ತಮ್ಮ ಅರವಿಂದ ಯೋಗಕೇಂದ್ರದ ಮೂಲಕ ಯೋಗವನ್ನು ಪ್ರಚಾರ ಮಾಡುತ್ತಿದ್ದಾರೆ. ಇತರ ಸ್ಥಳಗಳಲ್ಲಿಯೂ ಜನರಿಗೆ ಯೋಗವನ್ನು ಕಲಿಸುತ್ತಿದ್ದಾರೆ’ ಎಂದು ಆಫ್ರಿಕಾ ಮೂಲದ ಯೋಗ ಗುರು ಅಲ್ಮಿಸ್ ಅವರನ್ನು ಪ್ರಶಂಸಿಸಿದರು.

ಕ್ರೀಡಾ ಸಾಧನೆಗೆ ಮೆಚ್ಚುಗೆ:

‘ಆಡುವವನು ಅರಳುತ್ತಾನೆ’ ಎಂಬ ನುಡಿಗಟ್ಟನ್ನು ಉಲ್ಲೇಖಿಸಿದ ಮೋದಿ, ದೇಶದ ಯುವಕರು ಈ ಹಿಂದೆ ಜನಪ್ರಿಯವಾಗಿಲ್ಲದ ಕ್ರೀಡೆಗಳನ್ನು ಈಗ ಹೆಚ್ಚು ಹೆಚ್ಚು ಸ್ವೀಕರಿಸುತ್ತಿರುವುದನ್ನು ಕುರಿತು ಸಂತೋಷ ವ್ಯಕ್ತಪಡಿಸಿದರು. ಇದೇ ವೇಳೆ ಗುಲ್‌ವೀರ್ ಸಿಂಗ್‌, ಅನಾಹತ್‌ ಸಿಂಗ್‌ ಮೊದಲಾದ ಕ್ರೀಡಾಳುಗಳನ್ನು ಕೊಂಡಾಡಿದರು. ದೇಶದಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಮಾಡುತ್ತಿರುವ ಸಾಧನೆ ಬಗ್ಗೆ ಮೆಚ್ಚುಗೆ ಸೂಚಿಸಿದರು.

70,000 ಕೆರೆ ನಿರ್ಮಾಣ:

‘ಕಳೆದ 11 ವರ್ಷಗಳಲ್ಲಿ ಜಲ ಸಂಚಯ್ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಸುಮಾರು 50 ಲಕ್ಷ ಕೃತಕ ನೀರು ಕೊಯ್ಲು ರಚನೆಗಳನ್ನು ನಿರ್ಮಿಸಲಾಗಿದೆ. ಅಮೃತ ಸರೋವರ ಅಭಿಯಾನದ ಅಡಿಯಲ್ಲಿ 70,000 ಕೆರೆಗಳನ್ನು ನಿರ್ಮಿಸಲಾಗಿದೆ. ಮಳೆಗಾಲ ಆರಂಭವಾಗುವ ಮೊದಲೇ ಈ ಸರೋವರಗಳ ಶುದ್ಧೀಕರಣವೂ ಆರಂಭವಾಗಿದೆ. ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಪ್ರತಿಯೊಂದು ಹಳ್ಳಿಯಲ್ಲೂ ಸಮುದಾಯ ಮಟ್ಟದ ಪ್ರಯತ್ನಗಳು ನಡೆಯುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ’ ಎಂದರು.

ಸೌರ ಯೋಜನೆ ಯಶಸ್ವಿ:

ಇದಲ್ಲದೆ, ಕೇಂದ್ರ ಸರ್ಕಾರದ ಸೂರ್ಯಘರ್‌ ಯೋಜನೆಯಿಂದ ಇಂದು ಅನೇಕರು ತಮ್ಮ ಮನೆ ಮೇಲೆ ಹಾಗೂ ಜಮೀನಿನಲ್ಲಿ ಸೌರಫಲಕ ಹಾಕಿಕೊಂಡು ವಿದ್ಯುತ್‌ನಲ್ಲಿ ಸ್ವಾವಲಂಬಿ ಆಗಿದ್ದಾರೆ. ಜತೆಗೆ ಇತರರಿಗೂ ವಿದ್ಯುತ್‌ ಮಾರುತ್ತಿದ್ದಾರೆ ಎಂದು ಪ್ರಶಂಸಿಸಿದರು.