ತೂತ್ತುಕುಡಿ (ತಮಿಳುನಾಡು): ಮುಖ್ಯಮಂತ್ರಿ ವಿಜಯ್ ಹಾಗೂ ಪರೋಕ್ಷವಾಗಿ ಅವರ ಗೆಳತಿ ತ್ರಿಶಾ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ, ಡಿಎಂಕೆ ಮಾಜಿ ಸಚಿವ ಹಾಗೂ ಶಾಸಕ ಅನಿತಾ ಆರ್. ರಾಧಾಕೃಷ್ಣನ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.
ಡಿಎಂಕೆ ಶಾಸಕ ಎಸ್. ಆಸ್ಟಿನ್ ಹಾಗೂ ವಿಜಯ್ ನಡುವೆ ವಾಗ್ವಾದ
ಇತ್ತೀಚೆಗೆ ವಿಧಾನಸಭೆಯಲ್ಲಿ ಡಿಎಂಕೆ ಶಾಸಕ ಎಸ್. ಆಸ್ಟಿನ್ ಹಾಗೂ ವಿಜಯ್ ನಡುವೆ ವಾಗ್ವಾದ ನಡೆಯುತ್ತಿತ್ತು. ಆಗ ವಿಜಯ್ ಮುಜಗರಕ್ಕೀಡಾದಂತೆ ಕಂಡುಬಂದಿದ್ದರು. ಈ ವಿಷಯವನ್ನು ಇತ್ತೀಚೆಗೆ ತಿರುಚೆಂದೂರು ಬಳಿಯ ಅತೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಸ್ತಾಪಿಸಿದ ಅನಿತಾ, ‘ಆಸ್ಟಿನ್ ಅವರು ವಿಜಯ್ ಮೇಲೆ ಆರೋಪ ಮಾಡಿದಾಗ ವಿಜಯ್ ಸುಮ್ಮನಿದ್ದರು. ಆಗ ನಾನು, ವಿಜಯ್ಗೆ ‘ಬಾಯಿ ತೆರೆದು ಮಾತಾಡಬಾರದೆ?’ ಎಂದು ಪ್ರಶ್ನಿಸಿದೆ. ಆಗ ವಿಜಯ್ ಸಿಕ್ಕಿಹಾಕಿಕೊಂಡಂತೆ ಕಂಡರು. ‘ಮನೆಯಲ್ಲಿ ನಟಿಯ ಜತೆಗೆ ಆರಾಮಾಗಿದ್ದೆ. ನಾನ್ಯಾಕೆ ಇಲ್ಲಿ ಬಂದು ಸಿಕ್ಕಿಹಾಕಿಕೊಂಡೆ?’ ಎಂದು ವಿಜಯ್ ಮನಸ್ಸಿನಲ್ಲೇ ಅಂದುಕೊಂಡಂತಿತ್ತು’ ಎಂದಿದ್ದರು. ನಟಿ ತ್ರಿಶಾ ಕೃಷ್ಣನ್ ಜತೆ ವಿಜಯ್ಗೆ ಆಪ್ತ ಸಂಬಂಧವಿದೆ ಎಂಬ ಗುಸುಗುಸು ನಡುವೆಯೇ ಅನಿತಾ ಅವರ ಈ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು.
ಡಿಎಂಕೆ ಖಂಡನೆ:
ಅನಿತಾ ಬಂಧನವನ್ನು ಡಿಎಂಕೆ ವರಿಷ್ಠ ಹಾಗೂ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಖಂಡಿಸಿದ್ದು, ‘ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಹತ್ಯೆ ಮತ್ತು ದರೋಡೆಗಳನ್ನು ತಡೆಯಲು ವಿಫಲವಾಗಿರುವ ಸರ್ಕಾರ ತರುತ್ತಿರುವ ಪರಿವರ್ತನೆ ಇದೇನಾ?’ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.
