ಸಾರಾಂಶ
ಸೊಲ್ಲಾಪುರ: ‘ನನಗೂ ಬಾಲ್ಯದಲ್ಲಿ ಇಂತಹ ಮನೆ ಇದ್ದಿದ್ದರೆ.....’ ಎಂದು ಹೇಳುತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕಣ್ಣೀರು ಹಾಕಿದ ಪ್ರಸಂಗ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಶುಕ್ರವಾರ ನಡೆಯಿತು.
ಕೇಂದ್ರೀಯ ವಸತಿ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ನೂತನ ಮನೆಗಳನ್ನು ಹಸ್ತಾಂತರಿಸುವ ವೇಳೆ ಮೋದಿ ಗದ್ಗದಿತರಾದರು.
ಸೊಲ್ಲಾಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರು 90 ಸಾವಿರ ಫಲಾನುಭವಿಗಳಿಗೆ ಸರ್ಕಾರಿ ಮನೆಗಳನ್ನು ವಿತರಿಸಿ ಮಾತನಾಡಿದರು.
ಈ ವೇಳೆ ‘ನಾನು ನಿಮಗಾಗಿ ನಿರ್ಮಿಸಲಾಗಿರುವ ಮನೆಗಳಿಗೆ ಈಗಷ್ಟೇ ಹೋಗಿ ಬಂದೆ. ಚಿಕ್ಕವನಾಗಿದ್ದಾಗ ನಾನೂ ಇಂಥ ಮನೆ ಹೊಂದಿರಬೇಕಿತ್ತು ಎನ್ನಿಸಿತು’ ಎಂದು ಕ್ಷಣಕಾಲ ಕಣ್ಣೀರು ಹಾಕಿದರು. ನಂತರ ನೀರು ಕುಡಿದು ಸುಧಾರಿಸಿಕೊಂಡು ಭಾಷಣ ಮುಂದುವರಿಸಿದರು.
ಇದೇ ವೇಳೆ, ‘ಜನರ ಕನಸುಗಳು ಈಡೇರಿದಾಗ ಸಂತೋಷವಾಗುತ್ತದೆ. ಅವರ ಆಶೀರ್ವಾದವೇ ನನ್ನ ಅತಿ ದೊಡ್ಡ ಹೂಡಿಕೆ.
ಜ.22ರಂದು ರಾಮಮಂದಿರ ಉದ್ಘಾಟನೆ ವೇಳೆ ಈ ಮ ನೆಗಳಲ್ಲಿ ದೀಪ ಬೆಳಗಿ, ಇದು ಬಡತನವನ್ನು ತೊಲಗಿಸುತ್ತದೆ’ ಪ್ರಧಾನಿ ಭಾವನಾತ್ಮಕ ಮನವಿ ಮಾಡಿದರು.
ರಾಮನ ಆದರ್ಶವೇ ನಮಗೆ ಪ್ರೇರಣೆ: ‘ನಮ್ಮ ಸರ್ಕಾರಕ್ಕೆ ಶ್ರೀರಾಮನ ಆದರ್ಶಗಳೇ ಪ್ರೇರಣೆ. ರಾಮ ತನ್ನ ಆಡಳಿತದಲ್ಲಿ ತೋರಿದ ಪ್ರಾಮಾಣಿಕತೆಯನ್ನೇ ನಾವು ಅಳವಡಿಸಿಕೊಂಡಿದ್ದೇವೆ. ಮೋದಿಯ ಗ್ಯಾರಂಟಿ ಎಂದರೆ ಗ್ಯಾರಂಟಿ ಪೂರ್ಣವಾಗುವ ಗ್ಯಾರಂಟಿ.
ಶ್ರೀರಾಮ ನಮಗೆ ಬಡವರು ಉದ್ಧಾರಕ್ಕಾಗಿ ಕೆಲಸ ಮಾಡುವುದನ್ನು ಕಲಿಸಿದ್ದಾನೆ. ಶ್ರೀರಾಮನೂ ಸಹ ಜನರ ಸಂತೋಷಕ್ಕಾಗಿ ಕೆಲಸ ಮಾಡಿದ್ದಾನೆ. ನಮ್ಮ ಸರ್ಕಾರವೂ ಸಹ ಅದನ್ನೇ ಮಾಡುತ್ತಿದೆ.
ಜನರ ಸಂಕಷ್ಟಗಳನ್ನು ತೀರಿಸಲು ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ’ ಎಂದು ಅವರು ಹೇಳಿದರು.‘ಮೋದಿಯ ಗೌರವ ಗ್ಯಾರಂಟಿ ಅಡಿಯಲ್ಲಿ ಇಲ್ಲಿಯವರೆಗೆ ನಾವು 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದೇವೆ.
4 ಕೋಟಿಗೂ ಅಧಿಕ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಜನರ ಬ್ಯಾಂಕ್ ಖಾತೆಗಳಿಗೆ 30 ಲಕ್ಷ ಕೋಟಿ ರು.ಗೂ ಅಧಿಕ ಹಣವನ್ನು ಜಮಾ ಮಾಡಿದೆ’ ಎಂದು ಅವರು ಹೇಳಿದರು.
ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ: ವಾರದಲ್ಲೇ 2ನೇ ಬಾರಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಸುಮಾರು 2 ಸಾವಿರ ಕೋಟಿ ರು. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಯೋಜನೆಯಡಿ ನಿರ್ಮಾಣವಾಗಿರುವ 90 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.