ನವದೆಹಲಿ: ಬಜೆಟ್‌ ಅಧಿವೇಶನದ ವೇಳೆ ಫೆ.4ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಕಲಾಪದಿಂದ ದೂರವುಳಿದದ್ದು ಯಾಕೆಂಬ ವಿಚಾರ ಆಡಳಿತ-ಪ್ರತಿಪಕ್ಷಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗುತ್ತಿರುವ ನಡುವೆಯೇ ಇದೀಗ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ‘ಸಾಕ್ಷಿಯ ರೂಪದಲ್ಲಿ’ ಕಾಂಗ್ರೆಸ್‌ನ ಮಹಿಳಾ ಸಂಸದರ ಗದ್ದಲದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಪ್ರಧಾನಿ ಅವರು ಕಲಾಪಕ್ಕೆ ಆಗಮಿಸಲು ಕೆಲವೇ ಕ್ಷಣಗಳಿವೆ ಎನ್ನುವಾಗ ಕಾಂಗ್ರೆಸ್‌ ಮಹಿಳಾ ಸಂಸದರು ಪ್ರಧಾನಿ ಕೂರುವ ಸ್ಥಳಕ್ಕಾಗಮಿಸಿ ತೀವ್ರ ಗದ್ದಲ ನಡೆಸುತ್ತಿರುವ ವಿಡಿಯೋ ಇದಾಗಿದೆ.

ಧಾನಿ ಕೂರುವ ಸ್ಥಳವನ್ನು ಸುತ್ತುವರಿದ ಮಹಿಳಾ ಸಂಸದರು

ಜ್ಯೋತಿಮಣಿ ಸೇರಿ ಕೆಲವು ಕಾಂಗ್ರೆಸ್ ಮಹಿಳಾ ಸಂಸದರು ಪ್ರಧಾನಿ ಕೂರುವ ಸ್ಥಳವನ್ನು ಸುತ್ತುವರಿದು ‘ಯಾವುದು ಸರಿಯೆನಿಸುತ್ತದೋ ಅದನ್ನೇ ಮಾಡಿ’ ಎಂಬ ಘೋಷಣೆಗಳುಳ್ಳ ಭಿತ್ತಿಪತ್ರ ಪದರ್ಶಿಸಿ ಪ್ರತಿಭಟನೆ ನಡೆಸುತ್ತಿರುವ ದೃಶ್ಯ ಅದರಲ್ಲಿದೆ. ಬಿಜೆಪಿಗರಾದ ಕಿರಣ್ ರಿಜಿಜು, ಗಿರಿರಾಜ್‌ ಸಿಂಗ್‌ ಅವರು ಕೈಮಗಿದು ಮನವಿ ಮಾಡಿದರೂ ಕೇಳಲಿಲ್ಲ ಎಂದು ಕಂಡುಬರುತ್ತದೆ.


ನಿವೃತ್ತ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರ ವಿವಾದಾತ್ಮಕ ಅಪ್ರಕಟಿತ ಕೃತಿ ಆಧರಿಸಿ ನಿಯತಕಾಲಿಕವೊಂದು ಮಾಡಿದ್ದ ವರದಿಯಲ್ಲಿ ಪ್ರಸ್ತಾಪಿಸಲಾದ ಸಾಲುಗಳನ್ನೇ ಸಂಸದರ ಬ್ಯಾನರ್‌ನಲ್ಲಿ ಪ್ರದರ್ಶಿಸಲಾಗಿತ್ತು.

ದುರ್ನಡತೆಗೆ ಕಾಂಗ್ರೆಸ್‌ ಹೆಮ್ಮೆ-ರಿಜಿಜು:

ಈ ವಿಡಿಯೋ ಮುಂದಿಟ್ಟುಕೊಂಡು ಪ್ರತಿಪಕ್ಷ ವಿರುದ್ಧ ಕಿಡಿಕಾರಿರುವ ರಿಜಿಜು, ‘ಕಾಂಗ್ರೆಸ್‌ ಪಕ್ಷ ತನ್ನ ಸಂಸದರ ದುರ್ನಡತೆಗೆ ಹೆಮ್ಮೆಪಡುತ್ತದೆ. ನಾವೇನಾದರೂ ಬಿಜೆಪಿ ಸಂಸದರನ್ನು ತಡೆಯದಿದ್ದರೆ ಮತ್ತು ಕಾಂಗ್ರೆಸ್‌ ಸಂಸದೆಯರನ್ನು ಎದುರಿಸಿ ಎಂದು ಬಿಜೆಪಿಯ ಮಹಿಳಾ ಸಂಸದರಿಗೆ ಹೇಳಿದ್ದರೆ ಅಲ್ಲಿ ಬೇರೆಯದೇ ಸ್ಥಿತಿ ನಿರ್ಮಾಣವಾಗುತ್ತಿತ್ತು. ನಾವು ಸಂಸತ್ತಿನ ಗೌರವ ಮತ್ತು ಘನತೆ ಕಾಪಾಡಲು ಬದ್ಧವಾಗಿರುವವರು’ ಎಂದು ಟ್ವೀಟಿಸಿದ್ದಾರೆ.

ಸಂಸತ್ತಿನಲ್ಲಿ ಮೋದಿ ಮೇಲಿನ ದಾಳಿ ಯತ್ನ ಆರೋಪಕ್ಕೆ ಸಂಬಂಧಿಸಿ ಸ್ಪೀಕರ್‌ ಓಂ ಪ್ರಕಾಶ್‌ ಬಿರ್ಲಾ ಇತ್ತೀಚೆಗೆ ಹೇಳಿಕೆ ನೀಡಿ, ಪ್ರತಿಪಕ್ಷಗಳ ಮಹಿಳಾ ಸಂಸದರ ದಾಳಿ ಉದ್ದೇಶ ಅರಿತು ಲೋಕಸಭಾ ಅಧಿವೇಶನದಿಂದ ದೂರವಿರುವಂತೆ ನಾನೇ ಪ್ರಧಾನಿಗಳಿಗೆ ಸಲಹೆ ನೀಡಿದ್ದಾಗಿ ತಿಳಿಸಿದ್ದರು.