ಸಾರಾಂಶ
ವಿದ್ಯುತ್ ಪೈಪ್ನಿಂದ ನೀರು ಬಂದಿದೆಯಷ್ಟೆ ಎಂಬುದಾಗಿ ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಸಮಜಾಯಿಷಿ ನೀಡಿದ್ದಾರೆ.
ಅಯೋಧ್ಯೆ: ರಾಮ ಮಂದಿರದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ ಎಂಬ ಆರೋಪಕ್ಕೆ ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಸ್ಪಷ್ಟನೆ ನೀಡಿದ್ದು, ‘ವಿದ್ಯುತ್ ಪೈಪ್ ಹಾಕಿದ್ದ ಬಿರುಕಿನಿಂದ ನೀರು ಬಂದಿದೆ ಹೊರತು, ಮಾಳಿಗೆ ಸೋರಿಕೆಯಿಂದಲ್ಲ’ ಎಂದು ಹೇಳಿದ್ದಾರೆ.
ಈ ಕುರಿತು ಎರಡನೇ ದಿನವೂ ಸ್ಪಷ್ಟನೆ ನೀಡಿದ ಮಿಶ್ರಾ,‘ಪೂರ್ತಿ ವ್ಯವಸ್ಥೆಯನ್ನು ನಾನೇ ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ವಿದ್ಯುತ್ ಪೈಪ್ ಅಳವಡಿಸಲು ಹಾಕಿರುವ ಪೈಪ್ನಿಂದ ನೀರು ಬರುತ್ತಿದೆ, ಹೊರತು ಸೋರಿಕೆಯಿಂದಲ್ಲ. ಈಗ ಎರಡನೇ ಅಂತಸ್ತಿನ ಮಾಳಿಗೆ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಎಲ್ಲವೂ ಸರಿಹೋಗುತ್ತದೆ’ ಎಂದರು.ನೀರು ಸೋರಿಕೆ ಬಗ್ಗೆ ಮಾತನಾಡಿದ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ‘ರಾಮ ಮಂದಿರದ ಗರ್ಭಗುಡಿಯಲ್ಲಿ ಅರ್ಚಕರು ಕುಳಿತುಕೊಳ್ಳುವ ಜಾಗದಲ್ಲೇ ನೀರು ಸೋರುತ್ತಿದೆ. ದೇಶದ ದೊಡ್ಡ ದೊಡ್ಡ ಎಂಜಿನಿಯರ್ಗಳು ಕಟ್ಟಿದ ಗುಡಿಯ ಸ್ಥಿತಿ ಹೀಗಿದೆ’ ಎಂದು ಆರೋಪಿಸಿದ್ದರು.