ನವದೆಹಲಿ: ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯ ಬಗ್ಗೆ ಮೋದಿ ಸರ್ಕಾರದ ಮೌನ, ದೇಶದ ವಿದೇಶಾಂಗ ನೀತಿಯ ದಿಕ್ಕು ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಗೆ ಲೇಖನ ಬರೆದಿರುವ ಸೋನಿಯಾ

ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಗೆ ಲೇಖನ ಬರೆದಿರುವ ಸೋನಿಯಾ, ‘ಮಾ.1ರಂದು ಖಮೇನಿ ಹತ್ಯೆಯನ್ನು ಇರಾನ್‌ ಸ್ಪಷ್ಟಪಡಿಸಿತು. ಆ ಘಟನೆಯ ಆಘಾತದ ಜೊತೆಗೆ ಭಾರತ ಸರ್ಕಾರದ ಮೌನವೂ ಆಘಾತಕಾರಿಯಾಗಿದೆ. ಇದು ನಮ್ಮ ವಿದೇಶಾಂಗ ನೀತಿಯ ದಿಕ್ಕು ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತದೆ’ ಎಂದಿದ್ದಾರೆ.

ಇರಾನ್‌ ಬೆಳವಣಿಗೆ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌

ಈ ನಡುವೆ ಇರಾನ್‌ ಬೆಳವಣಿಗೆ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ‘ಖಮೇನಿ ಹತ್ಯೆಯ ಬಗ್ಗೆ ಮೌನವು ಜಗತ್ತಿನಲ್ಲಿ ಭಾರತದ ಸ್ಥಾನವನ್ನು ಕುಗ್ಗಿಸುತ್ತಿದೆ. ಭಾರತವು ನೈತಿಕವಾಗಿ ಸ್ಪಷ್ಟವಾಗಿರಬೇಕು. ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಜೀವಗಳ ರಕ್ಷಣೆಯಲ್ಲಿ ನಾವು ಸ್ಪಷ್ಟವಾಗಿ ಮಾತನಾಡುವ ಧೈರ್ಯ ಹೊಂದಿರಬೇಕು. ನಮ್ಮ ವಿದೇಶಾಂಗ ನೀತಿಯು ಸಾರ್ವಭೌಮತ್ವ ಮತ್ತು ವಿವಾದಗಳಿಗೆ ಶಾಂತಿಯುತ ಪರಿಹಾರದಲ್ಲಿ ಬೇರೂರಿದೆ. ಅದು ಸ್ಥಿರವಾಗಿರಬೇಕು’ ಎಂದು ಆಗ್ರಹಿಸಿದ್ದಾರೆ.