ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಬಾರ್ ಅಸೋಸಿಯೇಷನ್ ಚುನಾವಣೆಯಲ್ಲಿ ಹಿರಿಯ ವಕೀಲ ಎಸ್.ಎಸ್.ಕಿವಡಸಣ್ಣವರ ಅಧ್ಯಕ್ಷರಾಗಿ ಚುನಾಯಿತರಾದರು.ಶುಕ್ರವಾರ ಚುನಾವಣೆ ನಡೆಯಿತು. ಅಂದೇ ರಾತ್ರಿ ಮತಗಳ ಎಣಿಕೆ ನಡೆದು, 1632 ಮತಗಳಲ್ಲಿ 914 ಮತಗಳನ್ನು ಪಡೆದು ಕಿವಡಸಣ್ಣವರ್ 6ನೇ ಬಾರಿ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕಾಗಿ ಎಸ್.ಎಸ್. ಕಿವುಡಸಣ್ಣವರ, ಸುಧೀರ ಜೈನ್ ಹಾಗೂ ಸುನೀಲ್ ಸಾಣಿಕೊಪ್ಪ ನಾಮಪತ್ರ ಸಲ್ಲಿಸಿದ್ದರು. ಲಿಂಗಾಯತ ವರ್ಸಸ್ ಇತರೆ ಸಮುದಾಯದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದವು.ಉಪಾಧ್ಯಕ್ಷರಾಗಿ ಮುಗಳಿ ಬಸವರಾಜ ಮಲ್ಲಪ್ಪ, ರಾಮಶೆಟ್ಟಿ ಶೀತಲ್ ಎಂ. ಮತ್ತು ವಿ.ವಿ.ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ವೈ.ಕೆ.ದೀವಟೆ, ಜಂಟಿ ಕಾರ್ಯದರ್ಶಿಯಾಗಿ ವಿಶ್ವನಾಥ ಸುಲ್ತಾನಪುರೆ, ಆಡಳಿತ ಮಂಡಳಿ ಸದಸ್ಯರಾಗಿ ಸುಮಿತ್ ಕುಮಾರ ಅಗಸಗಿ, ಈರಣ್ಣ ಪೂಜೇರ , ಸುರೇಶ ಕಾಡಪ್ಪ ನಿಂಗನೂರೆ ಮತ್ತು ಅನಿಲ ಪಾಟೀಲ, ಮಹಿಳಾ ಪ್ರತಿನಿಧಿಯಾಗಿ ಅಶ್ವಿನಿ ಹವಾಲ್ದಾರ ಆಯ್ಕೆಯಾಗಿದ್ದಾರೆ. ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಬಾರ್ ಅಸೋಸಿಯೇಷನ್ ನೂತನ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ, ಚುನಾವಣೆಯಲ್ಲಿ ಎಲ್ಲ ಸಮುದಾಯದ ವಕೀಲರು ನನಗೆ ಮತಹಾಕಿ ಆಯ್ಕೆ ಮಾಡಿದ್ದಾರೆ. ಮುಂದಿನ ಎರಡೂ ವರ್ಷದ ಅವಧಿಯಲ್ಲಿ ವಕೀಲರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ಯುವ ವಕೀಲರಿಗೆ ಗುಣಮಟ್ಟದ ಕಚೇರಿ, ಕ್ಯಾಂಟಿನ್ ಹಾಗೂ ಜ್ಯೂಡಿಶೀಯಲ್ ಪರೀಕ್ಷೆ, ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಬೆಳಗಾವಿಗೆ ಕರೆಸಿ ತರಬೇತಿ ನೀಡಲಾಗುವುದು ಎಂದು ಹೇಳಿದರು.