ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನಲ್ಲಿ ತೀವ್ರ ಬರದಿಂದ ಜನ- ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಗುಂಡ್ಲುಪೇಟೆ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಲು ಆಗ್ರಹಿಸಿ ಪಟ್ಟಣದಲ್ಲಿ ಮಾದರಿ ಗುಂಡ್ಲುಪೇಟೆ ಅಭಿಯಾನದ ರೂವಾರಿ ಡಾ.ಬಿ.ಎಸ್.ಅಜಯ್ ಕುಮಾರ್ ನೇತೃತ್ವದಲ್ಲಿ ನೂರಾರು ಮಂದಿ ಮಹಿಳೆಯರು, ರೈತರು, ಯುವಕರು ರೈತ ಮನವಿ ಜಾಥಾ ನಡೆಸಿದರು.ಅಭಿಯಾನದ ರೂವಾರಿ ಡಾ.ಬಿ.ಎಸ್.ಅಜಯ್ ಕುಮಾರ್ ನೇತೃತ್ವದಲ್ಲಿ ೧೮೯೫ ಮಂದಿ ರೈತರ ಸಹಿಯುಳ್ಳ ಹಾಗೂ ೧೦ ಬೇಡಿಕೆಗಳ ಪಟ್ಟಿಯನ್ನು ತಹಸೀಲ್ದಾರ್ ಎಂ.ಎಸ್.ತನ್ಮಯ್ ಗೈರು ಹಾಜರಿಯಲ್ಲಿ ಶಿರಸ್ತೇದಾರ್ಗೆ ಮೂಲಕ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಿರಸ್ತೇದಾರ್ ವಿನೋದ್ ಮಾತನಾಡಿ, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದಾಗ ಮಧ್ಯ ಪ್ರವೇಶಿಸಿದ ಅಭಿಯಾನದ ರೂವಾರಿ ಡಾ.ಬಿ.ಎಸ್.ಅಜಯ್ ಕುಮಾರ್ ಮಾತನಾಡಿ, ಮಳೆ ಬೀಳದೆ ತಾಲೂಕಿನ ಜನ- ಜಾನುವಾರುಗಳಿಗೆ ತೊಂದರೆಯಾಗಿದೆ, ಆದ್ದರಿಂದ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲು ಮನವಿ ಮಾಡಿದರು.ಅಲ್ಲದೆ ಜನರ ಸಂಕಷ್ಟ ಅರಿತು ಬರ ಪೀಡಿತ ರೈತ ಮನವಿ ಜಾಥಾ ನಡೆದಿದ್ದು, ರಾಜ್ಯ ಸರ್ಕಾರ ಈ ಅಭಿಯಾನದ ೧೦ ಬೇಡಿಕೆಗಳನ್ನು ಈಡೇರಿಸಲು ೧೦ ದಿನಗಳ ಕಾಲಾವಕಾಶ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರೈತಸಂಘ ಬೆಂಬಲ:
ಡಾ.ಬಿ.ಎಸ್. ಅಜಯ್ ಕುಮಾರ್ ನೇತೃತ್ವದ ಅಭಿಯಾನದ ಜಾಥಾಗೆ ರೈತಸಂಘದ ನಾಗಪ್ಪ ಬಣದ ಕಾರ್ಯಕರ್ತರು ಭಾಗವಹಿಸಿ ಬೆಂಬಲ ನೀಡಿದರು. ಪ್ರತಿಭಟನಾ ಜಾಥಾದಲ್ಲಿ ಹಳದಿ ಬಣ್ಣದ ಟೀ ಶರ್ಟ್ ನಲ್ಲಿ ಮಾದರಿ ಗುಂಡ್ಲುಪೇಟೆ ಅಭಿಯಾನದ ಎನ್ನುವ ಘೋಷಣೆ ಸಾರ್ವಜನಿಕರ ಗಮನ ಸೆಳೆಯಿತು. ನೂರಾರು ಮಂದಿ ಜಾಥಾದಲ್ಲಿ ಇದ್ದರು.
-------ಬೇಡಿಕೆಗಳೇನು?
ತಾಲೂಕಿನ ಎಲ್ಲ ಹಳ್ಳಿಗಳಿಗೆ ತುರ್ತಾಗಿ ಕುಡಿಯುವ ನೀರು ಒದಗಿಸುವುದು. ಕೆರೆ, ಕೊಳವೆಬಾವಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದು, ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ಮತ್ತು ಸರ್ಕಾರ ನಿಗದಿಪಡಿಸಿದ ಬೆಳೆ ನಷ್ಟ ಪರಿಹಾರ ನೀಡಬೇಕು. ನೀರಿನ ಮೂಲಗಳಿಲ್ಲದ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಬೇಕು, ಕೊಳವೆಬಾವಿ, ಚೆಕ್ಡ್ಯಾಂ ನಿರ್ಮಾಣದ ಮೂಲಕ ಅಂತರ್ಜಲ ಹೆಚ್ಚಿಸುವ ಯೋಜನೆ ಜಾರಿಗೊಳಿಸಬೇಕು, ಮೇವು ಮತ್ತು ನೀರಿನ ತೀವ್ರ ಅಭಾವದಿಂದಾಗಿ ಜಾನುವಾರುಗಳಿಗೆ ತುರ್ತು ಮೇವು ನೆರವು ನೀಡಬೇಕು, ಪಶು ವೈದ್ಯಕೀಯ ನೆರವು, ಜಾನುವಾರು ಮಾರಾಟಕ್ಕೆ ನಿರ್ಬಂಧ ತೆಗೆದು ದನ- ಕುರಿ ರಕ್ಷಣೆಗೆ ಕ್ರಮಕೈಗೊಳ್ಳಬೇಕು, ನರೇಗಾ ಮತ್ತು ೨೦೨೫-೨೬ ರ ವಿಬಿ ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಒಗದಿಸಬೇಕು, ಬರದಿಂದ ಬೆಳೆ ನಾಶವಾದ ಹಿನ್ನೆಲೆ ಕೃಷಿ ಸಾಲ ಮರುಪಾವತಿಗೆ ಮುಂದೂಡಿಕೆ ಮತ್ತು ಸರ್ಕಾರಿ ಸಂಸ್ಥೆಗಳಿಂದ ನೆರವು ನೀಡಬೇಕು, ಮುಂದಿನ ಋತುವಿಗೆ ಬಿತ್ತನೆ ಬೀಜ, ಗೊಬ್ಬರ ಮತ್ತು ಕೃಷಿ ಪರಿಕರಗಳಿಗೆ ಸಹಾಯ ಮಾಡಬೇಕು, ತಾಲೂಕು ಮಟ್ಟದಲ್ಲಿ ಜನ ಸಮಿತಿ ರಚಿಸಿ ಸಮಗ್ರ ಪರಿಹಾರ ಯೋಜನೆ ರೂಪಿಸುವುದು, ತಾಲೂಕನ್ನು ಮಾದರಿ ಮಾಡಬೇಕು ಎಂಬುದು ಮಾದರಿ ಗುಂಡ್ಲುಪೇಟೆ ಅಭಿಯಾನ ದ ಉದ್ದೇಶವಾಗಿದೆ.-------ಗುಂಡ್ಲುಪೇಟೆ ತಾಲೂಕನ್ನು ಮಾದರಿ ಮಾಡಬೇಕು ಎಂಬುದು ಮಾದರಿ ಗುಂಡ್ಲುಪೇಟೆ ಅಭಿಯಾನದ ಉದ್ದೇಶ ಹಾಗೂ ಆಶಯವಾಗಿದೆ ಎಂದು ಅಭಿಯಾನದ ರೂವಾರಿ ಡಾ.ಬಿ.ಎಸ್.ಅಜಯ್ ಕುಮಾರ್ ಹೇಳಿದರು.
ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆ(ಐಎಚ್ಡಿಯುಎ) ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಗುಂಡ್ಲುಪೇಟೆ ತಾಲೂಕಲ್ಲಿ ೨ ದಶಕಗಳಿಂತಲೂ ಹೆಚ್ಚು ಕಾಲ ಸಮಾಜ ಸೇವೆ ಮಾಡುತ್ತ ಬಂದಿದ್ದೇನೆ ಎಂದರು. ಪ್ರಸ್ತುತ ಮಳೆ, ಬೆಳೆ ಇಲ್ಲದೆ ಬರಗಾಲ ಬಂದಿದೆ. ಬರ ಪೀಡಿತ ತಾಲೂಕು ಎಂದು ಘೋಷಿಸಲು ಮಾದರಿ ಗುಂಡ್ಲುಪೇಟೆ ಅಭಿಯಾನದಡಿ ರೈತ ಮನವಿ ಜಾಥಾ ನಡೆದಿದೆ. ೧೮೯೫ ರೈತರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಲ್ಲದೆ ಐಎಚ್ಡಿಯುಎನಲ್ಲಿ ೯ ಸಾವಿರಕ್ಕೂ ಹೆಚ್ಚು ಸದಸ್ಯರು ಇದ್ದಾರೆ ಎಂದರು.ಜನ ಬಲ ಇದ್ದರೆ ಸಾಕು, ಎಲ್ಲವನ್ನೂ ಜಯಿಸಬಹುದು ಎಂಬ ನಂಬಿಕೆಯೊಂದಿಗೆ ತಾಲೂಕು ಮಾದರಿ ಮಾಡುವ ಕನಸು ಹೊತ್ತಿದ್ದೇನೆ. ಇದರಲ್ಲಿ ರಾಜಕೀಯ ಇಲ್ಲದೆ ಜನರು ಮುಂದೆ ಬರಬೇಕು ಎಂಬುದು ನನ್ನ ಕನಸು ಕೂಡ. ಅದು ನನಸು ಮಾಡಲು ಪ್ರಯತ್ನಿಸಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಎಚ್ಡಿಯುಎ ಯೋಜನಾ ಮುಖ್ಯಸ್ಥ ಮಧು ಇದ್ದರು.