'ಕಾನೂನು ಗೊತ್ತಿಲ್ಲದೆ ತಪ್ಪು ಮಾಡಿದರೂ ಕ್ಷಮೆ ಇಲ್ಲ'

| Published : May 14 2024, 01:06 AM IST / Updated: May 14 2024, 12:18 PM IST

'ಕಾನೂನು ಗೊತ್ತಿಲ್ಲದೆ ತಪ್ಪು ಮಾಡಿದರೂ ಕ್ಷಮೆ ಇಲ್ಲ'
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಹಾಗೂ ಆಸ್ತಿ ಮಾರಾಟ ಮತ್ತು ಖರೀದಿ, ಜನನ, ಮರಣ, ಕಂದಾಯ ಇಲಾಖೆ ಕೆಲಸ ಕಾರ್ಯಗಳ ಕುರಿತು ಎಲ್ಲರಿಗೂ ಕನಿಷ್ಠ ಕಾನೂನಿನ ತಿಳಿವಳಿಕೆ ಇರಬೇಕು

 ಚಿಕ್ಕಬಳ್ಳಾಪುರ :   ಕಾನೂನು ಅರಿವು ಎಲ್ಲರಿಗೂ ಅಗತ್ಯ. ನನಗೆ ಕಾನೂನಿನ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರೆ ಯಾರಿಗೂ ಕಾನೂನು ಕ್ಷಮಿಸುವುದಿಲ್ಲ ಎಂದು ಜಿಲ್ಲಾ ಹಿರಿಯ ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಅರುಣಾಕುಮಾರಿ ತಿಳಿಸಿದರು.

ತಾಲೂಕಿನ ಮಂಚನಬಲೆ ಗ್ರಾಮದ ಬಿಜಿಎಸ್ ಶಾಲೆಯಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ.ಕೆಂಪೇಗೌಡ ಕಾನೂನು ಮಹಾವಿದ್ಯಾಲಯ, ಜಿಲ್ಲಾ ವಕೀಲ ಸಂಘ, ಗೌತಮ ಬುದ್ಧ ಫೌಂಡೇಶನ್ (ರಿ.) ಮತ್ತು ಮಂಚನಬಲೆ ಗ್ರಾಮ ಪಂಚಾಯಿತಿ ಇವರುಗಳ ವತಿಯಿಂದ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾನೂನಿನ ಸಾಮಾನ್ಯ ಜ್ಞಾನ ಅಗತ್ಯ

ಪ್ರತಿಯೊಬ್ಬರಿಗೂ ದೈನಂದಿನ ಜೀವನಕ್ಕೆ ಅನ್ವಯವಾಗುವ ಸಾಮಾನ್ಯ ಕಾನೂನು ಕುರಿತು ಮಾಹಿತಿ, ಅರಿವು ಇರಲೇಬೇಕು. ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಹಾಗೂ ಆಸ್ತಿ ಮಾರಾಟ ಮತ್ತು ಖರೀದಿ, ಜನನ, ಮರಣ, ಕಂದಾಯ ಇಲಾಖೆ ಕೆಲಸ ಕಾರ್ಯಗಳ ಕುರಿತು ಕನಿಷ್ಠ ಕಾನೂನಿನ ತಿಳಿವಳಿಕೆ ಇರಬೇಕು ಎಂದರು.

ಕಾನೂನಿನ ಅರಿವು ಇಲ್ಲ ಎಂದು ಸಮಾಜದಲ್ಲಿ ಯಾರೂ ತಮಗೆ ಸಿಗಬೇಕಾದ ಹಕ್ಕು ಮತ್ತು ನ್ಯಾಯದಿಂದ ವಂಚಿತರಾಗಬಾರದು. ಅದಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸಲು ಜನರ ಮನೆ ಬಾಗಿಲಿಗೆ ಹೋಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಪ್ರಾಧಿಕಾರಿದ ನೆರವು ಪಡೆಯಿರಿ

ಜಿಲ್ಲಾ ಮೂರನೆ ಹೆಚ್ಚುವರಿ ನ್ಯಾಯಾಧೀಶ ಸನತ್ ರವರು ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ರಚನೆಯಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ನ್ಯಾಯಾಲಯದಲ್ಲಿ ಪ್ರಕರಣದ ಸಮಸ್ಯೆ ಇತ್ಯರ್ಥಪಡಿಸಲು ಅಸಮರ್ಥರಾದರೆ ಪ್ರಾಧಿಕಾರವೇ ವಕೀಲರನ್ನು ನೇಮಿಸಿ, ಶುಲ್ಕವನ್ನು ಭರಿಸಲಿದೆ ಎಂದರು.

ಈ ವೇಳೆ ಜಿಲ್ಲಾ ನ್ಯಾಯಾಧೀಶರಾದ ಬಾಲಪ್ಪ ಅಪ್ಪಣ್ಣ ಜರಗು,ಲಾವಣ್ಯ, ಲಕ್ಷ್ಮೀ ಕಾಂತ್ ಮಿಸ್ಕಿನ್, ಮಹಮದ್ ರೋಷನ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸ್,ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮುರಳಿಮೋಹನ್, ಪ್ಯಾನಲ್ ವಕೀಲರಾದ ಮಂಜುನಾಥರೆಡ್ಡಿ, ಸೌಜನ್ಯ ಗಾಂಧಿ, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್,ತಹಸೀಲ್ದಾರ್ ಅನಿಲ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ,ಕೆಂಪೇಗೌಡ ಕಾನೂನು ಕಾಲೇಜಿನ ಪ್ರಾಂಶುಪಾಲೆ ಶೋಭ, ಗೌತಮ ಬುದ್ಧ ಫೌಂಡೇಶನ್ ಅಧ್ಯಕ್ಷ ಬಿ.ಗಂಗರಾಜು ಗ್ರಾಪಂ ಪಿಡಿಒ ರಾಮಕೃಷ್ಣ, ಮತ್ತಿತರರು ಇದ್ದರು.