ಮುಂಗಾರಿಗೆ 1 ತಿಂಗಳು : 12 ಜಿಲ್ಲೇಲಿ ಮಳೆ ಕೊರತೆ

| N/A | Published : Jun 30 2025, 12:34 AM IST / Updated: Jun 30 2025, 10:50 AM IST

ಸಾರಾಂಶ

ರಾಜ್ಯದಲ್ಲಿ ಮುಂಗಾರು ಆರಂಭಗೊಂಡು ಒಂದು ತಿಂಗಳು ಪೂರ್ಣಗೊಂಡಿದ್ದು, ಒಟ್ಟಾರೆ ವಾಡಿಕೆ ಪ್ರಮಾಣದ ಮಳೆಯಾಗಿದೆ. ಆದರೂ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದೆ.

 ಬೆಂಗಳೂರು :  ರಾಜ್ಯದಲ್ಲಿ ಮುಂಗಾರು ಆರಂಭಗೊಂಡು ಒಂದು ತಿಂಗಳು ಪೂರ್ಣಗೊಂಡಿದ್ದು, ಒಟ್ಟಾರೆ ವಾಡಿಕೆ ಪ್ರಮಾಣದ ಮಳೆಯಾಗಿದೆ. ಆದರೂ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದೆ.

ಈ ವರ್ಷ ಮುಂಗಾರು ಜೂನ್‌ ಮೊದಲ ವಾರದದ ಬದಲು ಮೇ ಕೊನೆಯ ವಾರದಲ್ಲಿ ಆಗಮಿಸುವ ಮೂಲಕ ಉತ್ತಮ ಆರಂಭ ನೀಡಿದೆ. ಸಾಮಾನ್ಯವಾಗಿ ಜೂನ್‌ 1 ರಿಂದ 25ರ ಅವಧಿಯಲ್ಲಿ 162.5 ಮಿ.ಮೀ. ನಷ್ಟು ವಾಡಿಕೆ ಮಳೆಯಾಗುತ್ತದೆ. ಆದರೆ ಈ ಬಾರಿ 184 ಮಿ.ಮೀ ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.13ರಷ್ಟು ಹೆಚ್ಚಾಗಿದೆ. ಕರಾವಳಿ ಜಿಲ್ಲೆಗಳಲ್ಲಿ 800 ಮಿ.ಮೀ ಮಳೆಯಾಗಿದ್ದು ಶೇ.17 ರಷ್ಟು ಅಧಿಕವಾಗಿದೆ. ಉತ್ತರ ಒಳನಾಡಿನಲ್ಲಿ 109.8 ಮಿ.ಮೀ (ಶೇ.28), ದಕ್ಷಿಣ ಒಳನಾಡಿನಲ್ಲಿ 124.9 ಮಿ.ಮೀ (ಶೇ.2) ಮಳೆಯಾಗಿದೆ.

ವಿವಿಧ ಜಿಲ್ಲೆಗಳಲ್ಲಿ ಮಳೆ ಕೊರತೆ: 

ವಾಡಿಕೆ ಪ್ರಮಾಣದಷ್ಟು ಹೆಚ್ಚಿನ ಮಳೆಯಾದರೂ, ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಶೇ.50ರಷ್ಟು ಕೊರತೆ ಆಗಿದೆ. ರಾಮನಗರದಲ್ಲಿ ಶೇ.74, ಬೆಂಗಳೂರು ನಗರ ಶೇ.54, ಚಾಮರಾಜನಗರ ಶೇ.41, ಚಿಕ್ಕಬಳ್ಳಾಪುರ ಶೇ.57, ಹಾಸನ ಶೇ.37, ಕೋಲಾರ ಹಾಗೂ ಮೈಸೂರಿನಲ್ಲಿ ತಲಾ ಶೇ.34, ಮಂಡ್ಯ ಶೇ.21 ರಷ್ಟು ಕೊರತೆಯಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ ಮತ್ತು ಯಾದಗಿರಿಯಲ್ಲಿ ತಲಾ ಶೇ.38, ಕೊಪ್ಪಳದಲ್ಲಿ ಶೇ.19ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.

ಜುಲೈ 3ರಿಂದ ಮಳೆ ಚುರುಕು

ರಾಜ್ಯದಲ್ಲಿ ಮಳೆಯ ಪ್ರಮಾಣ ಒಂದೆರಡು ದಿನಗಳಿಂದ ಕಡಿಮೆಯಾಗಿದ್ದು, ಜುಲೈ 3ರಿಂದ ಮತ್ತೆ ಹೆಚ್ಚಾಗಲಿದೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ ಜುಲೈ 3ರಿಂದ ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಲಾಗಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಮಳೆ ಆಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

Read more Articles on