ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ ಕಾರ್ಯವನ್ನು ಅತ್ಯಂತ ನಿಷ್ಠೆ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸಿ, ನಿಗದಿತ ಅವಧಿಗೂ ಮುನ್ನವೇ ಮನೆ ಪಟ್ಟಿ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಳಿಸಿದ 10 ಜನ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ನಗರಸಭೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.ನಗರಸಭೆಯ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಧೋಳ ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಅವರು ಸಾಧನೆಗೈದ ಸಿಬ್ಬಂದಿಗೆ ಹೂಗುಚ್ಛ ನೀಡಿ, ಪ್ರಶಂಸನಾ ಪತ್ರ ವಿತರಿಸುವ ಮೂಲಕ ಅಭಿನಂದಿಸಿದರು.
ಯೋಜನಾಬದ್ಧ ಕಾರ್ಯವೈಖರಿಗೆ ಮೆಚ್ಚುಗೆ:ಈ ವೇಳೆ ಮಾತನಾಡಿದ ಪೌರಾಯುಕ್ತ ಗೋಪಾಲ ಕಾಸೆ ಅವರು, ಭಾರತ ಜನಗಣತಿ ಯಂತಹ ಮಹತ್ವದ ರಾಷ್ಟ್ರೀಯ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದು ಅತ್ಯಗತ್ಯ. ನಗರಸಭೆ ವ್ಯಾಪ್ತಿಯಲ್ಲಿನ 112 ಬ್ಲಾಕ್ಗಳಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರು ತೋರಿದ ಒಗ್ಗಟ್ಟು ಮತ್ತು ಯೋಜನಾಬದ್ಧ ಕಾರ್ಯವೈಖರಿಯಿಂದಾಗಿ, ನಿಗದಿತ ಅವಧಿಗೂ ಮೊದಲೇ ಮನೆ ಪಟ್ಟಿ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಿದೆ. ಇವರ ಈ ಸಮರ್ಪಣಾ ಮನೋಭಾವ ಮತ್ತು ಕಾರ್ಯದಕ್ಷತೆ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಗಿಸಿದರು.
ಗೌರವ ಸ್ವೀಕರಿಸಿದ ಸಾಧಕರು:ಏಪ್ರಿಲ್ 16ರಿಂದ ಆರಂಭವಾದ ಈ ಮಹತ್ವದ ಕಾರ್ಯಾಚರಣೆಯನ್ನು ಅಂದುಕೊಂಡಿದ್ದಕ್ಕಿಂತಲೂ ಮುಂಚಿತವಾಗಿ ಮುಕ್ತಾಯಗೊಳಿಸಿದ ರಂಜನಾ ಬೂಸರಡ್ಡಿ, ಹೇಮಕ್ಕ ವಸನಾದ್, ಮುತ್ತಪ್ಪ ತೇರದಾಳ, ಎಸ್.ಆರ್. ಗೊಡಚಿ, ಮಂಜುಳಾ ಚಂಬರ್, ಸಿ.ಬಿ. ಸಂಗಣ್ಣವರ್, ಲಕ್ಷ್ಮಿ ಗಸ್ತಿ, ಅಮರ್ ವಲ್ಗಡ್, ಮಹಾಂತೇಶ ಗುಳಪ್ಪಗೋಳ, ಮಹಮ್ಮದ್ಬಾಷಾ ಬಿದರಿ ಈ ಹತ್ತು ಜನ ಸಾಧಕರನ್ನು ಸನ್ಮಾನಿಸಲಾಯಿತು.
ನಗರಸಭೆ ಕಚೇರಿ ವ್ಯವಸ್ಥಾಪಕಿ ಭಾರತಿದೇವಿ ಜೋಶಿ, ಗಣೇಶ ಬುರುಡ, ಸಿದ್ದು ಅರಳಿಮಟ್ಟಿ, ಸಹಾಯಕ ಅಭಿಯಂತರ ಮಧುಮತಿ ಭಟ್ಟರ, ವಿವಿಧ ಹಂತದ ಮೇಲ್ವಿಚಾರಕರು, ನಗರಸಭೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.