ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ಉಪನದಿಗಳು ತುಂಬುತ್ತಿರುವುದರಿಂದ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ಅಂದಾಜು 3500 ಕ್ಯುಸೆಕ್‌ನಷ್ಟು ನೀರು ಬಿಡುಗಡೆಯಾಗಿದೆ.

ಸದ್ಯ ಬಿಡುಗಡೆಗೊಂಡಿರುವ ನೀರು ಬೆಳಗಾವಿ ಜಿಲ್ಲೆಯ ನೀರಿನ ಬವಣೆಯನ್ನು ಕೊಂಚ ಮಟ್ಟಿಗೆ ತಗ್ಗಿಸಲು ನೆರವಾಗುವುದೇ ವಿನಃ ಬಾಗಲಕೋಟೆ ಜಿಲ್ಲೆಯವರೆಗೆ ತಲುಪುವುದು ಸಾಧ್ಯವಿಲ್ಲ ಎಂಬುವುದು ನೀರಾವರಿ ತಜ್ಞರೇ ಅಭಿಪ್ರಾಯ. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಿದರೆ ಮಾತ್ರ ಕೃಷ್ಣೆ ಮೈದುಂಬಿಕೊಳ್ಳಲು ಸಾಧ್ಯ.

ಸೇತುವೆ ಕಾರ್ಯದಲ್ಲಿ ತೊಡಕಿಲ್ಲ: ಮಹಿಷವಾಡಗಿ ಸೇತುವೆಗೆ ಸಂಬಂಧಿಸಿದ ಪಿಲ್ಲರ್ ನಂ.7 ಮತ್ತು 8ರ ನದಿಯೊಳಗಿನ ಕಾರ್ಯ ಪೂರ್ಣಗೊಂಡಿದೆ. ಇನ್ನೆರಡು ದಿನಗಳಲ್ಲಿ 10 ಅಡಿಯಷ್ಟು ಮತ್ತೆ ಎತ್ತರಕ್ಕೆ ಪಿಲ್ಲರ್‌ಗಳು ನಿರ್ಮಾಣವಾದಲ್ಲಿ ನದಿಯೊಳಗೆ ನೀರಿದ್ದರೂ ಮುಂದಿನ ದಿನಗಳಲ್ಲಿ ಸೇತುವೆ ಕಾಮಗಾರಿ ಸರಾಗವಾಗಿ ನಡೆಯಲಿದೆ ಎಂದು ಶಾಸಕ ಸಿದ್ದು ಸವದಿ ಸ್ಪಷ್ಟಪಡಿಸಿದರು.