ಕನ್ನಡಪ್ರಭ ವಾರ್ತೆ ಸಿಂದಗಿ ಒಬ್ಬ ವ್ಯಕ್ತಿ ತನ್ನ ವೃತ್ತಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ಚಟುವಟಿಕೆಯಲ್ಲಿ ಅಸಾಮಾನ್ಯ ಸೇವೆ ಮಾಡುವುದು ಸುಲಭದ ಮಾತಲ್ಲ. ದಿ. ಡಾ.ಬಿ.ಆರ್.ನಾಡಗೌಡರು ತಮ್ಮ ವೈದ್ಯಕೀಯ ವೃತ್ತಿಯೊಂದಿಗೆ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಅನುಪಮ ಕಾರ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಒಬ್ಬ ವ್ಯಕ್ತಿ ತನ್ನ ವೃತ್ತಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ಚಟುವಟಿಕೆಯಲ್ಲಿ ಅಸಾಮಾನ್ಯ ಸೇವೆ ಮಾಡುವುದು ಸುಲಭದ ಮಾತಲ್ಲ. ದಿ. ಡಾ.ಬಿ.ಆರ್.ನಾಡಗೌಡರು ತಮ್ಮ ವೈದ್ಯಕೀಯ ವೃತ್ತಿಯೊಂದಿಗೆ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಅನುಪಮ ಕಾರ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಅನಂತಲಕ್ಷ್ಮೀ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ ಡಾ.ಬಿ.ಆರ್.ನಾಡಗೌಡ ಅವರ ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿದರು. ಸಿಂದಗಿಯಲ್ಲಿ ಸೇವೆ ಮಾಡಿ ಸಾಧಕರಾಗಿರುವ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ, ಪತ್ರಿಕಾ ಭೀಷ್ಮ ರೇ.ಚ.ರೇವಡಿಗಾರ, ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಹೆಸರಿನ ಮೇಲೆ ಪ್ರತಿಷ್ಠಾನಗಳು ಪ್ರಾರಂಭಗೊಂಡು ಅನೇಕ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಆರೋಗ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಅವರ ಹಾದಿಯಲ್ಲಿ ಡಾ.ಬಿ.ಆರ್.ನಾಡಗೌಡ ಅವರ ಪ್ರತಿಷ್ಠಾನ ಸಮಾಜಮುಖಿ ಕಾರ್ಯ ಮಾಡಲಿ ಅವರೊಂದಿಗೆ ಸದಾ ನಾವು ನಿಲ್ಲುತ್ತೇವೆ ಎಂದರು.
ಈ ವೇಳೆ ಕರ್ನಾಟಕ ಜಾನಪದ ಅಕಾಡಮಿ ಸದಸ್ಯ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿ, ನಾಡಗೌಡ ಅವರ ಸೇವೆ ನಿಜಕ್ಕೂ ಶ್ಲಾಘನೀಯ. ವೈದ್ಯಕೀಯ ವೃತ್ತಿಯಲ್ಲಿ ಅನುಪಮ ಸೇವೆ ಮಾಡಿದರು ಅವರ ಹೆಚ್ಚಿನ ಆಸಕ್ತಿ ಸಾಹಿತ್ಯದ ಕಡೆಗೆ ಇತ್ತು. ಸಿಂದಗಿಯಲ್ಲಿ ಮೊಟ್ಟ ಮೊದಲ ಬಾರಿಗೆ ವರಕವಿ ದ.ರಾ.ಬೇಂದ್ರೆ ಅವರನ್ನು ಕರೆಸಿ ಸಾಹಿತ್ಯದ ಕಾರ್ಯ ಮಾಡಿದ್ದರು. ನಟಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪ, ಅಮೃತ, ಸಾನಿಧ್ಯ, ಚಿಂತನೆಗಳು, ರೀಡಿಂಗ್ ಸೇರಿದಂತೆ ಹಲವು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರದು ಶಿಸ್ತಿನ ಬದುಕಿನಲ್ಲಿ ಎಷ್ಟೇ ಕಷ್ಟಗಳು ಬಂದರು ಅಂಜದೆ ಎದೆಗುಂದದೆ ಮುನ್ನುಗ್ಗಿದವರು ಅವರ ಹೆಸರನ್ನು ನೆನಪಿಸುವ ಪ್ರತಿಷ್ಠಾನ ಸದಾ ಕ್ರಿಯಾತ್ಮಕವಾಗಿ ಕಾರ್ಯಮಾಡಲಿ ಎಂದು ಹಾರೈಸಿದರು.ಈ ವೇಳೆ ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ.ಜಿ.ಜೋಷಿ ಮಾತನಾಡಿ, ಡಾ.ನಾಡಗೌಡ ಅವರ ಸಾಹಿತ್ಯಿಕ ಸೇವೆಗೆ ಈ ಭಾಗದ ಅನೇಕ ರೀತಿಯಲ್ಲಿ ಶ್ಲಾಘಿಸಿದೆ. ಅವರ ಹೆಸರಿನ ಪ್ರತಿಷ್ಠಾನ ಇನ್ನು ಹೆಚ್ಚು ಕಾರ್ಯಗಳನ್ನು ಮಾಡಿಲಿ ಎಂದು ಹರಸಿದರು.
ಈ ವೇಳೆ ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಭೀಮಾಶಂಕರ ಮಠದ ದತ್ತಯೋಗೀಶ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಪ್ರತಿಷ್ಠಾನದ ಅಧ್ಯಕ್ಷ ಶರದ ನಾಡಗೌಡ, ಗುರುರಾಜ ನಾಡಗೌಡ, ಡಾ.ಶಾರಂಗಧರ ನಾಡಗೌಡ ಇದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಡಾ.ಶಾರದಾ ನಾಡಗೌಡ, ಮಿತ್ರಾವಿಂದ ಪಾಟೀಲ, ವಿಂಧ್ಯಾ ನಾಡಗೌಡ, ಕಲ್ಪನಾ ದೇಸಾಯಿ ಸೇರಿದಂತೆ ಇತರರು ಹಾಜರಿದ್ದರು.