ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪತ್ರಿಕೋದ್ಯಮವೆಂದರೆ ಕೇವಲ ಒಂದು ವೃತ್ತಿಯಲ್ಲ, ಅದು ಸಮಾಜದತ್ತ ಇರುವ ಪವಿತ್ರ ಜವಾಬ್ದಾರಿ. ಸತ್ಯವನ್ನು ಹುಡುಕುವ ಧೈರ್ಯ, ಜನರ ಧ್ವನಿಯಾಗುವ ಬದ್ಧತೆ ಹಾಗೂ ಇತಿಹಾಸ ದಾಖಲಿಸುವ ಹೊಣೆಗಾರಿಕೆಯೇ ಪತ್ರಿಕೋದ್ಯಮದ ನಿಜವಾದ ಮೌಲ್ಯಗಳಾಗಿವೆ ಎಂದು ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಹೇಳಿದರು.ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಆಶ್ರಯದಲ್ಲಿ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸತ್ಯವನ್ನು ದಾಖಲಿಸಲು ಸಂಕಷ್ಟಗಳನ್ನು ಲೆಕ್ಕಿಸದೆ ಮೈದಾನಕ್ಕಿಳಿಯುವ ಪತ್ರಕರ್ತರು, ಜನರ ಬದುಕಿನ ಕಥೆಗಳನ್ನು ಜಗತ್ತಿನ ಮುಂದಿಡುತ್ತಾರೆ. ಪತ್ರಕರ್ತರ ಪ್ರತಿಯೊಂದು ಬರಹ, ಛಾಯಾಚಿತ್ರ ಹಾಗೂ ವರದಿ ಕಾಲದ ಸಾಕ್ಷಿಯಾಗಿ ಉಳಿಯುತ್ತದೆ. ಸುದ್ದಿಗಳು ಕಾಲಕ್ರಮೇಣ ಹಳೆಯದಾಗಬಹುದು, ಆದರೆ, ನಿಷ್ಠೆಯಿಂದ ಮಾಡಿದ ಪತ್ರಿಕೋದ್ಯಮ ಇತಿಹಾಸವಾಗಿ ಶಾಶ್ವತವಾಗಿರುತ್ತವೆ, ಇಂದಿನ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳ ಓದಿನಿಂದ ಸಾಮಾಜಿಕ ಅರಿವು, ಸಾಮಾನ್ಯ ಜ್ಞಾನ ಹಾಗೂ ಸಮಕಾಲೀನ ವಿದ್ಯಮಾನಗಳ ಬಗ್ಗೆ ತಿಳುವಳಿಕೆ ವೃದ್ಧಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಮೂಲಕ ಕನ್ನಡ ಪತ್ರಿಕಾ ದಿನ ವಿಶಿಷ್ಟವಾಗಿ ಆಚರಿಸಲಾಯಿತು.ಐಕ್ಯೂಎಸಿ ಸಂಯೋಜಕ ಜಿ.ಎಂ.ನಾವದಗಿ, ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ಎಂ.ನಂಜುಂಡಸ್ವಾಮಿ, ಕಾರ್ಯದರ್ಶಿ ಬಸವರಾಜ ಖೋತ, ಬಿಬಿಎ ವಿಭಾಗದ ಮುಖ್ಯಸ್ಥೆ ನಂದಿನಿ ದೊಡ್ಡಮನಿ, ಉಪನ್ಯಾಸಕಿ ಸಂಗೀತ ಗರಗದಮಠ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.