.6 ಕಳವು ಪ್ರಕರಣ: ಮೂವರ ಬಂಧನ

| Published : Aug 18 2024, 01:50 AM IST

ಸಾರಾಂಶ

ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಸರಹದ್ದು ರಾಮಸಂದ್ರ (ತೂಲಂಪಲ್ಲಿ)ದ ವಿಜಯಲಕ್ಷೀ ರವರ ಮನೆಯಲ್ಲಿ ಮತ್ತು ಕನುಮನಹಳ್ಳಿ ಗ್ರಾಮದ ಬಸಪ್ಪ ರವರ ಮನೆಯಲ್ಲಿ ಚಿನ್ನದ ಆಭರಣಗಳು ಕಳುವಾಗಿದ್ದು, ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಪಾಂಡುರಂಗ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕಾಮಸಮುದ್ರಂ ವೃತ್ತದ ಪೊಲೀಸರು ವಿವಿಧ ಠಾಣೆಗಳ ೬ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಬಂಧಿಸಿ ೩.೫೫ ಲಕ್ಷ ಮೌಲ್ಯದ ಕಳವು ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಕಾಮಸಮುದ್ರಂ ಸರಹದ್ದು ರಾಮಸಂದ್ರ (ತೂಲಂಪಲ್ಲಿ) ಗ್ರಾಮದ ವಿಜಯಲಕ್ಷೀ ರವರ ಮನೆಯಲ್ಲಿ ಮತ್ತು ಕನುಮನಹಳ್ಳಿ ಗ್ರಾಮದ ಬಸಪ್ಪ ರವರ ಮನೆಯಲ್ಲಿ ಚಿನ್ನದ ಆಭರಣಗಳು ಕಳುವಾಗಿದ್ದು, ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಮಾಡುವ ಸಲುವಾಗಿ ಡಿವೈಎಸ್‌ಪಿ ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಕಾಮಸಮುದ್ರಂ ಸಿಪಿಐ ಜಿ.ಸಿ ನಾರಾಯಣಸ್ವಾಮಿ ಹಾಗೂ ಪಿಎಸ್‌ಐ ಕಿರಣ್‌ಕುಮಾರ್ ರವರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು. ಆಂಧ್ರದ ಮೂವರ ಬಂಧನ

ಕಾರ್ಯಾಚರಣೆ ನಡೆಸಿದ ಪೊಲೀಸರು ಆಂದ್ರಪ್ರದೇಶದ ವಿ.ಕೋಟ ನಿವಾಸಿ ದೇವೇಂದ್ರ, ಭುವನೇಶ್ ಮತ್ತು ರಾಜಮಂಡ್ರಿ ನಿವಾಸಿ ಕಂದಿ ಶ್ರೀಗಣೇಶ್‌ಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ರಾಮಸಂದ್ರ ಮತ್ತು ಕನಮನಹಳ್ಳಿ ಕಳವು ಪ್ರಕರಣಗಳಿಗೆ ಸಂಬಂಧಿಸಿದ ೧.೬೦ ಲಕ್ಷ ಮೌಲ್ಯದ ೨೩.೩೯ ಗ್ರಾಂ ತೂಕದ ಚಿನ್ನಾಭರಣಗಳ ಮತ್ತು ಕ್ಯಾಸಂಬಳ್ಳಿ, ಬೇತಮಂಗಲ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಕಳವು ಪ್ರಕರಣಗಳಿಗೆ ಸಂಬಂಧಿಸಿದ ೧.೯೫ ಲಕ್ಷ ಮೌಲ್ಯದ ೨೦೦ ಗ್ರಾಂ ತೂಕದ ೪ ಬೆಳ್ಳಿ ನಾಣ್ಯಗಳು, ವಿವಿಧ ಕಂಪನಿಯ ಸಿಗರೇಟ್ ಬಂಡಲ್‌ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್‌ ತಂಡಕ್ಕೆ ಎಸ್ಪಿ ಅಭಿನಂದನೆ

ಆರೋಪಿಗಳನ್ನು ಬಂಧಿಸಿ ಒಟ್ಟು ರೂ. ೩.೫೫ ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಭಾಗವಹಿಸಿದ ಕಾಮಸಮುದ್ರಂ ಸಿಪಿಐ ಜಿ.ಸಿ. ನಾರಾಯಣಸ್ವಾಮಿ, ಪಿಎಸ್‌ಐ ಕಿರಣ್‌ಕುಮಾರ್, ಸಿಬ್ಬಂದಿ ಕೃಷ್ಣ, ಮಂಜುನಾಥ್, ಗಜೇಂದ್ರ, ಶ್ರೀನಿವಾಸ್, ಮಾರ್ಕೊಂಡ, ಲಕ್ಷ್ಮಣ್‌ತೇಲಿ, ಅಭಿಶೇಕ್, ಶಿವಾನಂದ, ಸುಜಾತ, ಸುಗುಣಮ್ಮ, ಗುರುಮೂರ್ತಿ, ಧನಂಜಯ ರವರುಗಳ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.