ಸಾರಾಂಶ
ನೂತನ ಅನುಭವ ಮಂಟಪದ ಕಾಮಗಾರಿಯನ್ನು 2026ರ ಅಂತ್ಯದೊಳಗೆ ಪೂರ್ಣಗೊಳಿಸಿ, ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿಸಬೇಕು ಎಂಬ ನಮ್ಮ ಸಂಕಲ್ಪವಿದೆ.
ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಇಡೀ ವಿಶ್ವಕ್ಕೆ ಮೊದಲ ಸಂಸತ್ ಎಂದೇ ಕರೆಯಲ್ಪಡುವ ಅನುಭವ ಮಂಟವೂ ನೂತನವಾಗಿ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿದ್ದು, ನೂತನ ಅನುಭವ ಮಂಟಪ ಯೋಜನೆಯ 742 ಕೋಟಿ ರು.ಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.ನೆಲಮಂಗಲ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೂವಿವಾದದ ಕಾರಣದಿಂದ ಮೊದಲು ನಿರ್ಧರಿಸಲಾದ ಸ್ಥಳದಲ್ಲಿ ಕಾಮಗಾರಿ ಸಾಧ್ಯವಾಗದೆ, ಬೇರೆ ಸ್ಥಳದಲ್ಲಿ ಜಾಗ ನೀಡಿದ ಕಂದಾಯ ಇಲಾಖೆ ಮತ್ತು ಯೋಜನಾ ವೆಚ್ಚದಲ್ಲಿ ಜಿಎಸ್ಟಿ ಶೇ. 18ಕ್ಕೆ ಏರಿಕೆ ಆದ ಪರಿಣಾಮ, ಮೊಟ್ಟಮೊದಲಿನ 612 ಕೋಟಿ ರು. ಯೋಜನೆಯು ಈಗ 742 ಕೋಟಿ ರು.ಗಳಿಗೆ ಪರಿಷ್ಕೃತವಾಗಿದೆ. ಈ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಎಲ್ಲ ಸಹೋದ್ಯೋಗಿ ಮಂತ್ರಿಗಳಿಗೆ ಭೂಮಿ ಒದಗಿಸಿದ ಕಂದಾಯ ಇಲಾಖೆಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.ನೂತನ ಅನುಭವ ಮಂಟಪದ ಕಾಮಗಾರಿಯನ್ನು 2026ರ ಅಂತ್ಯದೊಳಗೆ ಪೂರ್ಣಗೊಳಿಸಿ, ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿಸಬೇಕು ಎಂಬ ನಮ್ಮ ಸಂಕಲ್ಪವಿದೆ ಎಂದರು.ಬೆಂಗಳೂರು ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಸುರೇಶ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು. ಪೋಟೋ 3 : ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ್ ಖಂಡ್ರೆ