ಹೊಸಕೋಟೆ: ತಾಲೂಕು ಕಚೇರಿಯಲ್ಲಿ ನಡೆಸುವ ಜನಸ್ಪಂದನ ಸಭೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕಳೆದ ಜನಸ್ಪಂದನ ಸಭೆಯಲ್ಲಿ ಒಟ್ಟು 73 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಶೇ.77ರಷ್ಟು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ 2ನೇ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ನೀಡಿದ್ದ ಪ್ರಕರಣಗಳಲ್ಲಿ ಒಂದೆರಡು ಇತ್ಯರ್ಥವಾಗಿಲ್ಲ, ಶೇ.23 ಪ್ರಕರಣಗಳಲ್ಲಿ ಕೆಲವು ನ್ಯಾಯಾಲಯದಲ್ಲಿವೆ. ಇನ್ನುಳಿದವು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳ ಸಮಕ್ಷಮಕ್ಕೆ ರವಾನಿಸಿದ್ದು, ಶೀಘ್ರದಲ್ಲೇ ಅವುಗಳನ್ನೂ ಬಗೆಹರಿಸಲಾಗುವುದು ಎಂದರು.ನಗರದ ಎಂವಿ ಬಡಾವಣೆಯಲ್ಲಿರುವ 1.6 ಎಕರೆ ಸರ್ಕಾರಿ ಜಾಗದಲ್ಲಿ ಹಲ ವರ್ಷಗಳಿಂದ 55 ಕುಟುಂಬಗಳು ಗುಡಿಸಲುಗಳಲ್ಲಿಯೇ ವಾಸವಿದ್ದು, ಆ ಜಾಗದಲ್ಲಿ ನಿವೇಶನಗಳನ್ನು ಮಾಡಿಕೊಡಬೇಕೆಂದು ಮುಖಂಡ ಸುರೇಶ್ ವೆಂಕಟರಮಣಪ್ಪ ನೇತೃತ್ವದಲ್ಲಿ ಕೊಳಚೆ ನಿವಾಸಿಗಳು ಶಾಸಕರಿಗೆ ಮನವಿ ಸಲ್ಲಿಸಿದರು.ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ಅಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೂ ಗುಂಪು ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಆದರೆ, ಮನವಿದಾರರು ಗುಂಪು ಮನೆಗಳು ಬೇಡ, ಪ್ರತ್ಯೇಕ ಮನೆಗಳು ಬೇಕು, ಕೆಲ ಕುಟುಂಬಗಳು ಹಸುಗಳನ್ನು ಸಾಕಿದ್ದು ಗುಂಪು ಮನೆ ಕಟ್ಟಿಸಿ ಕೊಟ್ಟಲ್ಲಿ ಜಾನುವಾರುಗಳ ಸಾಕಾಣಿಕೆ ಕಷ್ಟವಾಗಲಿದೆ ಎಂದು ಮನವಿ ಮಾಡಿದರು.ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯಿಸಿ, ನಗರ ಪ್ರದೇಶದಲ್ಲಿ ವಾಸಿಸಲು ಇಚ್ಛೆ ಪಡುವವರಿಗೆ ಗುಂಪು ಮನೆ ಕಟ್ಟಿ ಕೊಡಲಾಗುವುದು ಹಾಗೂ ಜಾನುವಾರು ಸಾಕಾಣಿಕೆದಾರರು ನಗರದ ಹೊರವಲಯದ ಕುಂಬಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತ್ಯೇಕ ನಿವೇಶನಗಳನ್ನು ನೀಡಲಾಗುವುದು. ಒಂದು ಎಕರೆ ಜಾಗದಲ್ಲಿ ೫೫ ಕುಟುಂಬಗಳು ನಡೆಸುವುದು ಕಷ್ಟ, ಆದ್ದರಿಂದ ಸರ್ಕಾರದ ಕಡೆಯಿಂದ ಗುಂಪು ಮನೆಗಳನ್ನು ಮಾಡಿಸಿಕೊಡುವ ಮೂಲಕ ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡಲಾಗುವುದು. ಸಭೆಯಲ್ಲಿ ಸ್ವೀಕರಿಸಿರುವ ಅಹವಾಲುಗಳಲ್ಲಿ ಜಮೀನು ಒತ್ತುವರಿ, ಕಸದ ಸಮಸ್ಯೆ, ರಸ್ತೆ ಸಮಸ್ಯೆ, ನೀರಿನ ಸಮಸ್ಯೆ ಹಾಗೂ ಮೂಲ ಸೌಕರ್ಯಗಳಿಗೆ ಸಂಬಂಧಪಟ್ಟ ದೂರುಗಳೇ ಹೆಚ್ಚಾಗಿದ್ದವು.ಸಭೆಯಲ್ಲಿ ತಹಸೀಲ್ದಾರ್ ಶೀತಲ್, ಡಿವೈಎಸ್ ಪಿ ಮಲ್ಲೇಶ್, ನಗರಸಭೆ ಆಯುಕ್ತ ನೀಲಲೋಚನಾ ಪ್ರಭು, ಕಂದಾಯ ಇಲಾಖೆ ಅಧಿಕಾರಿಗಳು ನಗರಸಭೆ ಅಧಿಕಾರಿಗಳು ಹಾಜರಿದ್ದರು.ಫೋಟೋ: 1 ಹೆಚ್‌ಎಸ್‌ಕೆ 1ಹೊಸಕೋಟೆಯ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.