ರಾಜ್ಯದಲ್ಲಿ ‘ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್ಐಆರ್)’ ಪ್ರಕ್ರಿಯೆ ಆರಂಭವಾಗಿದ್ದು, ಮೂರನೇ ದಿನವಾದ ಗುರುವಾರ ರಾಜ್ಯದ ಕೆಲವೆಡೆ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿದ ಘಟನೆಗಳು ವರದಿಯಾಗಿವೆ.
ಬೆಂಗಳೂರು : ರಾಜ್ಯದಲ್ಲಿ ‘ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್ಐಆರ್)’ ಪ್ರಕ್ರಿಯೆ ಆರಂಭವಾಗಿದ್ದು, ಮೂರನೇ ದಿನವಾದ ಗುರುವಾರ ರಾಜ್ಯದ ಕೆಲವೆಡೆ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿದ ಘಟನೆಗಳು ವರದಿಯಾಗಿವೆ. ತುಮಕೂರು ಜಿಲ್ಲೆ ಕುಣಿಗಲ್ನ ಬಡಾವಣೆಯೊಂದರಲ್ಲಿ ಬಿಎಲ್ಒಗಳು ಇಲ್ಲದೇ ಮಹಿಳೆಯರು ಸಾಮೂಹಿಕವಾಗಿ ಎಸ್ಐಆರ್ ಎನುಮ್ಯುರೇಷನ್ ಫಾರ್ಮ್ ತುಂಬುತ್ತಿದ್ದುದು ಕಂಡು ಬಂದರೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಗಾರ್ಡರಗದ್ದೆಯಲ್ಲಿ ಮತದಾರರಿಗೆ ಒಂದು ಜಾಗಕ್ಕೆ ಬರುವಂತೆ ಪೋಸ್ಟರ್ ಅಂಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಮನೆಮನೆಗೆ ತೆರಳಿ ಮತದಾರರ ಮಾಹಿತಿ ಪರಿಶೀಲಿಸಿ ಅರ್ಜಿಗಳನ್ನು ವಿತರಿಸಬೇಕು
ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ಒ ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ಮಾಹಿತಿ ಪರಿಶೀಲಿಸಿ ಅರ್ಜಿಗಳನ್ನು ವಿತರಿಸಬೇಕು.
ತುಮಕೂರು ಜಿಲ್ಲೆಯ ಕುಣಿಗಲ್ನ ಬಡಾವಣೆಯೊಂದರಲ್ಲಿ ಸಾಮೂಹಿಕವಾಗಿ ಎಸ್ಐಆರ್ ಪ್ರಕ್ರಿಯೆ ನಡೆದಿದ್ದು, ಬಿಎಲ್ಒಗಳು ಇಲ್ಲದೇ ಮಹಿಳೆಯರು ಎಸ್ಐಆರ್ ಎನುಮ್ಯುರೇಷನ್ ಫಾರ್ಮ್ ತುಂಬುತ್ತಿದ್ದುದು ಕಂಡು ಬಂದಿದೆ. ಸಾರ್ವಜನಿಕರು ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಒಂದೇ ಸ್ಥಳಕ್ಕೆ ಬರುವಂತೆ ತಿಳಿಸಲಾಗಿದೆ
ಇನ್ನು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಗಾರ್ಡರ್ ಗದ್ದೆಯಲ್ಲಿರುವ ನ್ಯಾಯಬೆಲೆ ಅಂಗಡಿ ಮುಂಭಾಗದಲ್ಲಿ ಪೋಸ್ಟರ್ ಹಾಕಲಾಗಿದ್ದು, ಮತದಾರರು ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳೊಂದಿಗೆ ಒಂದೇ ಸ್ಥಳಕ್ಕೆ ಬರುವಂತೆ ತಿಳಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು, ಆಗುಂಬೆ ಭಾಗದಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಒಂದೇ ಕಡೆ ಸೇರಿದಲ್ಲಿ ಅನುಕೂಲ ಆಗಬಹುದು ಎಂಬ ಕಾರಣಕ್ಕೆ ಕೆಲವು ಸಾರ್ವಜನಿಕರು ಈ ಪೋಸ್ಟರ್ ಹಾಕಿದ್ದರು. ಇದರಲ್ಲಿ ಬಿಎಲ್ಒಗಳಿಂದ ಯಾವುದೇ ರೀತಿಯ ಕರ್ತವ್ಯಚ್ಯುತಿ ಆಗಿಲ್ಲ ಎಂದಿದ್ದಾರೆ.

