770 ಅಮರಗಣಂಗಳರ ಸ್ಮಾರಕ ಲಿಂಗ ಪುನರುಜ್ಜೀವನ: ಸುನೀಲಗೌಡ ಪಾಟೀಲ

| Published : Mar 09 2024, 01:33 AM IST / Updated: Mar 09 2024, 01:34 AM IST

770 ಅಮರಗಣಂಗಳರ ಸ್ಮಾರಕ ಲಿಂಗ ಪುನರುಜ್ಜೀವನ: ಸುನೀಲಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ₹1.51 ಕೋಟಿ ವೆಚ್ಚದಲ್ಲಿ ನವೀಕರಿಸಲಾದ 770 ಲಿಂಗಗಳ ದೇವಸ್ಥಾನ ಹಾಗೂ ಪುನರುಜ್ಜೀವನ ಮಾಡಲಾದ ಲಿಂಗಗಳನ್ನು ಭಕ್ತಿಕೇಂದ್ರವಾದ 770 ಅಮರಗಣಂಗಳರ ಸ್ಮಾರಕ ಲಿಂಗ ದೇವಾಲಯ(ಲಿಂಗದ ಗುಡಿ) ನವೀಕರಣ ಮತ್ತು ಮಂದಿರದಲ್ಲಿರುವ ಎಲ್ಲ ಲಿಂಗಗಳನ್ನು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಭಕ್ತಿಕೇಂದ್ರವಾದ 770 ಅಮರಗಣಂಗಳರ ಸ್ಮಾರಕ ಲಿಂಗ ದೇವಾಲಯ(ಲಿಂಗದ ಗುಡಿ) ನವೀಕರಣ ಮತ್ತು ಮಂದಿರದಲ್ಲಿರುವ ಎಲ್ಲ ಲಿಂಗಗಳನ್ನು ಪುನರುಜ್ಜೀವನ ಮಾಡುವ ಅವಕಾಶ ಬಿ.ಎಲ್.ಡಿಇ ಸಂಸ್ಥೆಗೆ ಒದಗಿರುವುದು ಸುದೈವ. ಈ ಮೂಲಕ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರು ಹಾಗೂ 12ನೇ ಶತಮಾನದ 770 ಶಿವಶರಣರಿಗೆ ನಾವು ಅಳಿಲು ಸೇವೆಯ ರೂಪದಲ್ಲಿ ಗೌರವ ಸಲ್ಲಿಸಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕ ಮತ್ತು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ₹1.51 ಕೋಟಿ ವೆಚ್ಚದಲ್ಲಿ ನವೀಕರಿಸಲಾದ 770 ಲಿಂಗಗಳ ದೇವಸ್ಥಾನ ಹಾಗೂ ಪುನರುಜ್ಜೀವನ ಮಾಡಲಾದ ಲಿಂಗಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಎಲ್‌ಡಿಇ ಡೀಮ್ಡ್ ವಿವಿಯಿಂದ ₹ 1.51 ಕೋಟಿ ವೆಚ್ಚದಲ್ಲಿ ಲಿಂಗದ ಗುಡಿ ನವೀಕರಣ ಮತ್ತು ಈ ಹಿಂದೆ ಶೆಲ್ಲಿಕೇರಿ ಶಿಲೆಗಳಿಂದ ತಯಾರಿಸಲಾಗಿದ್ದ ಎಲ್ಲ ಲಿಂಗಗಳನ್ನು ಈಗ ಕೃಷ್ಣ ಶಿಲೆಯಿಂದ ಹೊಸದಾಗಿ ತಯಾರಿಸಿ ಪುನರುಜ್ಜೀಗೊಳಿಸಲಾಗಿದೆ. ಕಳೆದ ವರ್ಷ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಇಲ್ಲಿಗೆ ಭೇಟಿ ನೀಡಿದಾಗ ಈ ಕಟ್ಟಡ ಹಾಗೂ ಲಿಂಗಗಳು ಶಿಥಿಲಗೊಂಡಿದ್ದನ್ನು ನೋಡಿ, ಪುನರುಜ್ಜೀವನಕ್ಕೆ ಸೂಚಿಸಿದ್ದರು. ಅವರ ಆಶಯದಂತೆ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿ ಮಹಾಶಿವರಾತ್ರಿಯಂದು ಭಕ್ತರಿಗಾಗಿ ಉದ್ಘಾಟಿಸಲಾಗಿದೆ ಎಂದರು.

12ನೇ ಶತಮಾನದಲ್ಲಿ ನಾನಾ ಜಾತಿ ಮತ್ತು ಸಮುದಾಯದ 770 ಜನ ಶಿವಶರಣರು ಬಸವೇಶ್ವರರ ಜೊತೆಗೂಡಿ ಅನುಭವ ಮಂಟಪದ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದರು. ಆದರೆ ಅವರಲ್ಲಿ ಬಸವೇಶ್ವರು, ಅಕ್ಕಮಹಾದೇವಿ ಸೇರಿದಂತೆ ಕೆಲವರ ಹೆಸರುಗಳನ್ನು ಹೊರತುಪಡಿಸಿದರೆ ಆದಯ್ಯ, ನನ್ನಯ್ಯ, ಸುಜ್ಞಾನಿ ದೇವ, ಕಲಕೇತ ಬೊಮ್ಮಯ್ಯ, ಏಕಾಂತದ ರಾಮಯ್ಯ ಸೇರಿದಂತೆ 770 ಅಮರಗಣಂಗಳರ ಹೆಸರುಗಳು ಚಿರಪರಿಚಿತವಾಗಿಲ್ಲ. ಈ ಎಲ್ಲ ಶರಣರ ಹೆಸರನ್ನು ಚಿರಸ್ಥಾಯಿಯಾಗಿಸಲು 1960ರಲ್ಲಿ ಬಂಥನಾಳ ಶಿವಯೋಗಿಗಳು ಇಲ್ಲಿ 770 ಅಮರಗಣಂಗಳರ ಲಿಂಗ ಪ್ರತಿಷ್ಠಾಪಿಸಿದ್ದರು. ಅಲ್ಲದೇ, ಅಂದು ಪ್ರತಿಯೊಂದು ಲಿಂಗ ಪ್ರತಿಷ್ಠಾಪನೆಯ ಜವಾಬ್ದಾರಿಯನ್ನು ತಲಾ ಒಬ್ಬ ದಂಪತಿಗೆ ನೀಡಿದ್ದರು. ಈ ದೇವಸ್ಥಾನ ಶಿಥಿಲಗೊಂಡ ಹಿನ್ನೆಲೆಯಲ್ಲಿ ಈಗ ಅದನ್ನು ನವೀಕರಣ ಮತ್ತು ಪುನರುಜ್ಜೀವನ ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಲಿಂಗಗಳು ಶಿಥಿಲವಾಗಿದ್ದರಿಂದ ಬಿ.ಎಲ್.ಡಿ.ಇ ಸಂಸ್ಥೆ ₹1.51 ಕೋಟಿ ವೆಚ್ಚದಲ್ಲಿ ನವೀಕರಣ ಮತ್ತು ಪುನರುಜ್ಜೀವನ ಮಾಡಿರುವುದು ಎಲ್ಲ ಭಕ್ತರಿಗೆ ಸಂತಸವಾದಿದೆ. ಅಲ್ಲದೇ, ಅಂದು 770 ಶಿವಶರಣರ ಲಿಂಗ ಪ್ರತಿಷ್ಠಾಪನೆಗೆ ಭಕ್ತಿಸೇವೆ ಸಲ್ಲಿಸಿದ್ದ ದಂಪತಿಯ ಹೆಸರನ್ನು ಸೇರಿಸಿ ನವೀಕರಿಸಲಾದ ನಾಮಫಲಕವನ್ನೂ ಅಳವಡಿಸುವ ಮೂಲಕ ಶಿವಶರಣರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗಿದೆ. ಪ್ರವಾಸೋದ್ಯಮ ಮತ್ತು ಅಧ್ಯಾತ್ಮಿಕ ಕ್ಷೇತ್ರಕ್ಕೆ ಹೆಸರಾಗಿರುವ ವಿಜಯಪುರ ನಗರದ ಭಕ್ತಿಕೇಂದ್ರವಾಗಿರುವ ಈ ದೇವಸ್ಥಾನ ಇನ್ನು ಮುಂದೆ ಮತ್ತಷ್ಟು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದು ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೊಟ್ನಾಳ, ಶರಣಬಸವ ವಾರದ, ಡಾ.ಮಹಾಂತೇಶ ಬಿರಾದಾರ, ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಎಂ.ಎಂ.ಸಜ್ಜನ, ಸಿದ್ರಾಮಪ್ಪ ಉಪ್ಪಿನ, ನೀಲಾ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಶಾಸಕ ಸುನೀಲಗೌಡ ಪಾಟೀಲ ಅವರು ತಮ್ಮ ಪತ್ನಿ ರೇಣುಕಾ ಅವರ ಜೊತೆ ಲಿಂಗದ ಗುಡಿಯಲ್ಲಿ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಅರ್ಚಕರಿಂದ ಆಶೀರ್ವಾದ ಪಡೆದರು.