ಕನ್ನಡಪ್ರಭ ವಾರ್ತೆ ಶಿರಾ

ಕನ್ನಡ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮವು ಸಾಹಿತ್ಯ ಸಮ್ಮೇಳನದಷ್ಟೇ ಪರಿಣಾಮಕಾರಿ ಹಾಗೂ ಜನಪರ ಕಾರ್ಯಕ್ರಮವಾಗಲಿದೆ ಎಂದು ಶಿರಾ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಯ್ಯ ಹೇಳಿದರು.

ಅವರು ನಗರದ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಿದ್ದ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವೀರಲೋಕ ಪುಸ್ತಕ ಸಂತೆಯಲ್ಲಿ ಬಹಳಷ್ಟು ಜನಸಾಮಾನ್ಯರು ಭಾಗವಹಿಸಿ ತಮ್ಮ ಇಷ್ಟದ ಪುಸ್ತಕಗಳನ್ನು ಖರೀದಿಸುವ ಅವಕಾಶ ದೊರೆಯಲಿದೆ. ಪುಸ್ತಕ ಓದುವ ಹವ್ಯಾಸವನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಜ್ಞಾನ ಮತ್ತು ಅರಿವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಸಮಾಜಸೇವಕ ಕಲ್ಕೆರೆ ರವಿಕುಮಾರ್ ಮಾತನಾಡಿ ಪುಸ್ತಕ ಓದುವ ಹವ್ಯಾಸವು ವ್ಯಕ್ತಿಯ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಸಮಾಜದ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಮಗೂ ಸಹ ಪುಸ್ತಕ ಓದುವ ಅಭ್ಯಾಸವಿದ್ದು, ಬೆಂಗಳೂರಿನ ಸಪ್ನಾ ಬುಕ್ ಸ್ಟಾಲ್‌ಗೆ ಭೇಟಿ ನೀಡಿದಾಗ ಒಂದೇ ಬಾರಿ ೨೦ ರಿಂದ ೨೫ ಸಾವಿರ ರುಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ ಎಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ವೀರಲೋಕ ಸಂಸ್ಥೆ ವತಿಯಿಂದ ಜೂನ್ ೨೬, ೨೭ ಹಾಗೂ ೨೮ರಂದು ತುಮಕೂರಿನ ಗಾಜಿನ ಮನೆಯಲ್ಲಿ ಮೂರು ದಿನಗಳ ಬೃಹತ್ ಪುಸ್ತಕ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಪ್ರಕಾಶಕರು, ಸಾಹಿತಿಗಳು ಹಾಗೂ ಲಕ್ಷಕ್ಕೂ ಹೆಚ್ಚು ಪುಸ್ತಕ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈ ಜ್ಞಾನೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಪುಸ್ತಕ ಸಂತೆ ಮೂಲಕ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಉತ್ತೇಜನ ನೀಡುವುದು, ಓದುವ ಹವ್ಯಾಸವನ್ನು ಬೆಳೆಸುವುದು ಹಾಗೂ ಹೊಸ ತಲೆಮಾರಿಗೆ ಕನ್ನಡ ಪುಸ್ತಕಗಳ ಪರಿಚಯ ಮಾಡಿಕೊಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಎಂದರು.


ಈ ಸಂದರ್ಭದಲ್ಲಿ ಜಿಲ್ಲಾ ಪುಸ್ತಕ ಸಂತೆ ಸಂಚಾಲಕರಾದ ಆರ್.ಕೆ.ಶ್ರೀನಿವಾಸ್, ಜಾನಪದ ಆಕಾಡೆಮಿ ಸದಸ್ಯರು ಹಾಗೂ ಜನಪದ ಗಾಯಕರಾದ ಮಲ್ಲಿಕಾರ್ಜುನ್ ಕೆಂಕೆರೆ, ರೂಪೇಶ್ ಕೃಷ್ಣಯ್ಯ, ತುಮಕೂರು ಎಕ್ಸ್‌ಪ್ರೆಸ್ ದಿನ ಪತ್ರಿಕೆ ಸಂಪಾದಕರಾದ ಸೀಗಲಹಳ್ಳಿ ನರಸಿಂಹ ಮೂರ್ತಿ, ಲೇಖಕಿ ಪೂರ್ಣಿಮಾ ಬಾಬು, ಸಾಹಿತಿ ಸಕ್ಕರ ನಾಗರಾಜು, ಹೆಂದೊರೆ ಶಿವಣ್ಣ, ದ್ವಾರನಕುಂಟೆ, ಲಕ್ಷಣ , ರವಿಕುಮಾರ್, ಹುಣಸೆಹಳ್ಳೆ ರಾಜಣ್ಣ, ಸೇರಿದಂತೆ ಹಲವು ಕನ್ಮಡ ಅಭಿಮಾನಿಗಳು ಭಾಗವಹಿಸಿದ್ದರು.

೧೩ಶಿರಾ೪: ಶಿರಾ ನಗರದ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.