ಕನ್ನಡಪ್ರಭ ವಾರ್ತೆ ಮಧುಗಿರಿ

ಧ್ವನಿ ಇಲ್ಲದ ವರ್ಗದವರ ಪರ ಕೆಲಸ ಮಾಡುವ ಶಾಸಕ ರಾಜಣ್ಣನವರಂತಹ ರಾಜಕಾರಣಿಗಳು ನಮ್ಮ ಭಾರತ ದೇಶಕ್ಕೆ ಅಗತ್ಯವಿದೆ ಎಂದು ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ತಾಲೂಕಿನ ಜಕ್ಕೇನಹಳ್ಳಿ-ಶಂಕರಪುರ ನಡುವೆ ಸುವರ್ಣಮುಖಿ ನದಿಗೆ, ಕಲಿದೇವಪುರ -ತಿಂಗಳೂರು ಸಮೀಪದ ಕುಮದ್ವತಿ ನದಿಗೆ ಹಾಗೂ ಮುದ್ದೇನಹಳ್ಳಿ - ಶ್ಯಾನಗಾನಹಳ್ಳಿ ಗ್ರಾಮಗಳ ನಡುವೆ ಜಯಮಂಗಲಿ ನದಿ 29 .50 ಕೋಟಿ ರು ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಕಂ ಬ್ಯಾರೇಜ್ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ರಾಜಣ್ಣ ಕ್ಷೇತ್ರದ ಜನರಿಗೆ ಸರ್ಕಾರಗಳಿಂದ ದೊರಕುವ ಎಲ್ಲ ಅನುದಾನವನ್ನು ತಂದು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ರೈತರ, ಕೃಷಿಕರ ಹಾಗೂ ಕೂಲಿಕಾರ್ಮಿಕರ ಬದುಕು ಕಟ್ಟಿಕೊಡುವಲ್ಲಿ ಶ್ರಮಿಸುತ್ತಿದ್ದು, ನೆಲವನ್ನೇ ನಂಬಿ ಬದುಕುವ ಅನ್ನದಾತರ ಮತ್ತು ಸಾರ್ವಜನಿಕರ ಅನುಕೂಲಕ್ಕೆ ಸ್ಪಂದಿಸಿ ಪರಿಹಾರ ದೊರಕಿಸಲು ರಾಜಣ್ಣ ಶಾಸಕರಾಗಿರಬೇಕು. ತಾಲೂಕಿನಲ್ಲಿ ಹಿಂದೆ ಈ ಭಾಗದ ರೈತರು ಕಬ್ಬು, ಮೆಣಸಿನಕಾಯಿ ಹೀಗೆ ಹತ್ತಾರು ಕಮರ್ಷಿಯಲ್ ಬೆಳೆಗಳನ್ನು ಬೆಳೆದು ಸಮೃದ್ಧವಾಗಿದ್ದ ಕಾಲವೊಂದಿತ್ತು. ಆದರೆ ಪ್ರಸ್ತುತ ಮಳೆ ಅವಕೃಪೆಗೆ ಸಿಲುಕಿ ಈ ಭಾಗದ ಪ್ರದೇಶಗಳು ಮರು ಭೂಮಿಯಾಗಿವೆ. ಇದನ್ನು ಮನಗಂಡ ಶಾಸಕ ರಾಜಣ್ಣ ರೈತರ ಏಳಿಗೆಗೆ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಈ ಭಾಗದ ನದಿಗಳಿಗೆ ಚೆಕ್ ಡ್ಯಾಂ ಕಂ ಬ್ಯಾರೇಜ್ ನಿರ್ಮಿಸಿ ರೈತರ ಮತ್ತು ಸಾರ್ವಜನಿಕರ ಅನುಕೂಲಕ್ಕೆ ಸ್ಪಂದಿಸಿದ್ದಾರೆ ಎಂದರು.

ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಮಳೆಯ ನಡುವೆಯೂ ಈ ಮಹತ್ವಕ ಕಾಮಗಾರಿಗಳನ್ನು ಲೋಕಾಪ್ರಣೆಗೊಳಿಸಿರುವುದು ಸಂತಸದ ಸಂಗತಿ. ಈ ಹೊಸ ಚೆಕ್ ಡ್ಯಾಂ ಕಂ ಬ್ಯಾರೇಜಿನಲ್ಲಿ ಇಮ್ಮಡಗೊಂಡನಹಳ್ಳಿಗಿಂತ ಸುಮಾರು 10 ಪಟ್ಟು ನೀರು ಸಂಗ್ರಹವಾಗಲಿದ್ದು,ಐ.ಡಿ.ಹಳ್ಳಿ ,ಕೊಡಿಗೇನಹಳ್ಳಿ ಹೋಬಳಿ ರೈತರಿಗೆ ಮುಂಬರುವ ದಿನಗಳಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದರು.


ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಕೆ.ಎಸ್.ಪಾಂಡುರಂಗಾರೆಡ್ಡಿ,ತಾ.ಜೆಡಿಎಸ್ ಅಧ್ಯಕ್ಷ ಬಿ.ಎಸ್‌.ಶ್ರೀನಿವಾಸ್,ಎಇಇ ತಿಪ್ಪೇಸ್ವಾಮಿ,ಇಇ ಸುರೇಶ್ ಮೇಟಿ,ಸಹಾಯಕ ಇಂಜಿನಿಯರ್ ಮಂಜು ಕಿರಿಣ್,ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು,ಮುಖಂಡರಾದ ಪಿ.ಸಿ.ಕೆ.ರೆಡ್ಡಿ,ಎಲ್.ಸಿ.ನಾಗರಾಜು,ತಾ.ಬಿಜೆಪಿ ಅಧ್ಯಕ್ಷ ಹುನುಮಂತರೆಡ್ಡಿ,ಪುರಸಭೆ ಮಾಜಿ ಅಧ್ಯಕ್ಷರಾದ ಎನ್.ಗಂಗಣ್ಣ,ಎಂ.ಕೆ.ನಂಜುಂಡರಾಜು.ಎಸಿ ಗೋಟೂರು ಶಿವಪ್ಪ,ತಹಸೀಲ್ದಾರ್ ಮಂಜುನಾಥ್,ಡಿವೈಎಸ್ಪಿ ಮಂಜುನಾಥ್ ಡಿಡಿಪಿಐ ಮಾದವರೆಡ್ಡಿ,ಬಿಇಓ ಹನುಮಂತರಾಯಪ್ಪ ,ಎಡಿ ಧನಂಜಯ್ ಹಾಗೂ ಮುಖಂಡರು ,ವಿವಿಧ ಇಲಾಖೆಯ ಅಧಿಕಾರಿಗಳು ,ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಇದ್ದರು.