ತೋಟಗಾರಿಕೆ ಬೆಳೆಗಳ ರೋಗ, ಕೀಟಗಳ ನಿರ್ವಹಣೆ ತರಬೇತಿ ಕಾರ್ಯಾಗಾರಕನ್ನಡಪ್ರಭ ವಾರ್ತೆ ಕುಮಟಾಸರ್ಕಾರ ಹಾಗೂ ಕೃಷಿ ತಜ್ಞರು ಸಂತ್ರಸ್ತ ಕೃಷಿಕನ ಬೆನ್ನಿಗೆ ನಿಂತು ಕಾಲಕಾಲಕ್ಕೆ ಮಾರ್ಗದರ್ಶನ ಮತ್ತು ಸಹಾಯ ನೀಡಬೇಕು. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ವಿವಿಧ ರೀತಿಯ ಸಮಸ್ಯೆಗಳು ಹೆಚ್ಚಾಗಿದೆ ಎಂದು ಪ್ರಗತಿಪರ ಕೃಷಿಕ ಚಿದಾನಂದ ಗಣಪತಿ ಹೆಗಡೆ ಹೇಳಿದರು.

ಮೂರೂರು ಗ್ರಾ.ವ್ಯ.ಸೇ. ಸಹಕಾರಿ ಸಂಘ, ಅಡಕೆ ಮಾರಾಟ ಸೌಹಾರ್ದ ಸಹಕಾರಿ, ಕೃಷಿ ಇಲಾಖೆ, ಕೂಜಳ್ಳಿಯ ಕಣಜ ರೈತ ಉತ್ಪಾದಕ ಸಂಸ್ಥೆ, ಎವಿಪಿ ಸೇವಾ ಸಂಸ್ಥೆ, ತೋಟಗಾರಿಕೆ ಇಲಾಖೆ, ಆತ್ಮ ಯೋಜನೆ, ಕೃಷಿಕ ಸಮಾಜದ ಸಹಯೋಗದಲ್ಲಿ ಕಲ್ಲಬ್ಬೆಯ ನಂದಿಕೇಶ್ವರ ಮಂದಿರದ ಸಭಾಭವನದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಕಾರ್ಯಕ್ರಮದಡಿ ಆಯೋಜಿಸಲಾಗಿದ್ದ ತೋಟಗಾರಿಕೆ ಬೆಳೆಗಳ ರೋಗ ಮತ್ತು ಕೀಟಗಳ ನಿರ್ವಹಣೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿರಸಿ ತೋಟಗಾರಿಕೆ ಕಾಲೇಜಿನ ಉಪನ್ಯಾಸಕ ಡಾ. ಪ್ರಸನ್ನ, ಅಡಕೆ ಎಲೆಚುಕ್ಕಿ ರೋಗ ಸಹಿತ ಈ ಭಾಗದ ಎಲ್ಲ ತೋಟಗಾರಿಕೆ ಬೆಳೆಗಳ ಹಲವು ಬಗೆಯ ರೋಗಗಳು, ಕೀಟಬಾಧೆಯ ನಿವಾರಣೋಪಾಯಗಳನ್ನು ವಿವರಿಸಿದರು.

ಕುಮಟಾ ಅಡಕೆ ಮಾರಾಟ ಸೌಹಾರ್ದದ ಉಪಾಧ್ಯಕ್ಷ ಸುರೇಶ ತಿಮ್ಮಣ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂರೂರು ವ್ಯ.ಸೇ.ಸ. ಅಧ್ಯಕ್ಷ ಗೋವಿಂದ ಭಟ್, ಎವಿಪಿ ಸೇವಾ ಸಂಸ್ಥೆ ಅಧ್ಯಕ್ಷ ಗಣಪತಿ ನಾಯ್ಕ, ಕಣಜ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವಿನಾಯಕ ಭಟ್ ಸಂತೆಗುಳಿ, ಕೃಷಿಕ ಸಮಾಜದ ಅಧ್ಯಕ್ಷ ಎನ್.ಎಸ್. ಹೆಗಡೆ, ಆತ್ಮಯೋಜನೆ ಅಧ್ಯಕ್ಷ ಪ್ರದೀಪಕುಮಾರ ಉಪಸ್ಥಿತರಿದ್ದರು.

ತೋಟಗಾರಿಕೆ ಸಹಾಯಕ ಅಧಿಕಾರಿ ಮಧುರಾ ಪಟಗಾರ ಸ್ವಾಗತಿಸಿದರು. ತೋಟಗಾರಿಕೆ ಸಹಾಯಕ ನಿರ್ದೇಶಕ ಲಿಂಗರಾಜ ಇಟ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಸಹಾಯಕ ಅಧಿಕಾರಿಗಳಾದ ಚಂದ್ರು ಪಟಗಾರ, ಪ್ರವೀಣ ಎಂ. ಕಾರ್ಯಕ್ರಮ ನಿರೂಪಿಸಿದರು. ಅಡಕೆ ಮಾರಾಟ ಸಹಕಾರಿಯ ಕಾರ್ಯದರ್ಶಿ ಕೆ.ವಿ. ನಾಗರಾಜ ವಂದಿಸಿದರು.