ಗದಗ: ರೈತರು ವ್ಯವಸಾಯದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.

ತಾಲೂಕಿನ ಹೊಂಬಳ ಗ್ರಾಮದ ಪ್ರಭುಸ್ವಾಮಿ ಮಠದ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ಬೆಟಗೇರಿಯ ರೈತ ಸಂಪರ್ಕ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪಲ್ಸ್ ಗ್ರೇಡರ್ ಯಂತ್ರದ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ಬೆಳೆಗಳ ಮೌಲ್ಯವರ್ಧನೆ ಮಾಡುವುದು ಅತ್ಯಂತ ಅವಶ್ಯಕ. ಇಂತಹ ಕೆಲಸಕ್ಕಾಗಿಯೇ ಪಲ್ಸ್‌ ಗ್ರೇಡರ್ ಯಂತ್ರ ಸಹಕಾರಿಯಾಗಿದೆ. ಒಕ್ಕಣೆ ಸಮಯದಲ್ಲಿ ರೈತರು ಈ ಯಂತ್ರ ಬಳಸಿ ಸಮಯ ಉಳಿತಾಯ ಮಾಡಬಹುದು ಹಾಗೂ ಕೂಲಿ ವೆಚ್ಚ ಕಡಿಮೆಗೊಳಿಸಬಹುದು ಎಂದರು.

ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಮಾತನಾಡಿ, ಪಲ್ಸ್ ಗ್ರೇಡರ್ ಯಂತ್ರ ಧಾನ್ಯಗಳನ್ನು ಗ್ರೇಡಿಂಗ್ ಮಾಡುವಲ್ಲಿ ರೈತರಿಗೆ ಬಹಳಷ್ಟು ಸಹಕಾರಿಯಾಗಿದೆ. ಈ ಯಂತ್ರದ ಮೂಲಕ ಗಂಟೆಗೆ 25 ಕ್ವಿಂಟಲ್ ಧಾನ್ಯಗಳನ್ನು ಒಕ್ಕಣೆ ಮಾಡಬಹುದು ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಮಾತನಾಡಿ, ರೈತರು ಬೆಳೆಗಳನ್ನು ಮೌಲ್ಯವರ್ಧಿಸಲು ಬಹಳ ಕಷ್ಟವಾಗುತ್ತಿತ್ತು. ಆದರೆ ಇಂದು ಪಲ್ಸ್ ಗ್ರೇಡರ್ ಯಂತ್ರದ ಮೂಲಕ ಗ್ರೇಡಿಂಗ್ ಬಹಳ ಸುಲಭವಾಗಿದೆ. ಸಬ್ಸಿಡಿ ದರದಲ್ಲಿ ಈ ಯಂತ್ರವು ಕೃಷಿ ಇಲಾಖೆಯಲ್ಲಿ ಲಭ್ಯವಿದ್ದು, ರೈತರು ಇದರ ಲಾಭ ಪಡೆದು ಅಭಿವೃದ್ಧಿ ಹೊಂದಬೇಕು ಎಂದರು.


ಕೃಷಿ ಅಧಿಕಾರಿ ಬಸವರಾಜೇಶ್ವರಿ ಸಜ್ಜನರ, ರಾಜು ಕೊರವನವರ, ವಸಂತ ಯಕ್ಲಸಾಪುರ ಹಾಗೂ ಗ್ರಾಮದ ರೈತರು, ಕೃಷಿ ಇಲಾಖೆಯ ಸಿಬ್ಬಂದಿ ಇದ್ದರು.