ಗಜೇಂದ್ರಗಡ: ಪಟ್ಟಣದ ಟಗರಿಗಲ್ಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಒಂದೇ ವಾರದಲ್ಲಿ ಭೇದಿಸಿದ್ದು, ಮೂವರು ಆರೋಪಿಗಳು ಸಹಿತ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಟಗರಿಗಲ್ಲಿಯ ಫೆ. ೧೭ರಂದು ತಡರಾತ್ರಿ ಮನೆಯೊಂದರಲ್ಲಿ ಕಳ್ಳತನ ಪ್ರಕರಣ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫೆ. ೨೩ರಂದು ಕುಷ್ಟಗಿ ಶಹರದ ರಾಷ್ಟ್ರೀಯ ಹೆದ್ದಾರಿ ಬ್ರಿಡ್ಜ್ ಹತ್ತಿರ ಸಂಶಯಾಸ್ಪದ ನಡವಳಿಕೆ ಹಿನ್ನೆಲೆ ನಾಗರಾಜ ದೇವರಮನಿ ಎಂಬಾತನನ್ನು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇನ್ನುಳಿದ ಆರೋಪಿಗಳಾದ ಶಿವಮ್ಮ ದೇವರಮನಿ, ಬಸಮ್ಮ ಇರಿಬಗೇರಿ ಎಂಬವರನ್ನು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿದೆ.ಆರೋಪಿಗಳಿಂದ ೭೮ ಗ್ರಾಂ ಬಂಗಾರದ ಆಭರಣ ಅಂದಾಜು ಹಾಗೂ ೭೧೧ ಗ್ರಾಂ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್ಪಿ ಅಭಿನಂದಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ ಜಗದೀಶ, ನರಗುಂದ ಉಪ ವಿಭಾಗ ಉಪಾಧೀಕ್ಷಕ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ರೋಣ ಸಿಪಿಐ ವಿಜಯಕುಮಾರ ನೇತೃತ್ವದಲ್ಲಿ ಗಜೇಂದ್ರಗಡ ಪಿಎಸ್ಐ ಪ್ರಕಾಶ ಡಿ., ಸಿಬ್ಬಂದಿಗಳಾದ ಜಗದೀಶ ಪೂಜಾರ, ಮಾಲತಿ ಶಿಗೀಹಳ್ಳಿ, ಸದಾಶಿವ ಕದಂ, ಮಲ್ಲಿಕಾರ್ಜುನ ಮುನೇನಕೊಪ್ಪ, ಎಸ್.ಎ. ಖಾಜಿ, ರಜೀಯಾ ಬನ್ನಿಗೋಳ, ಹುಸೇಸಾಬ ಮ್ಯಾಗಳಮನಿ, ಮುತ್ತಪ್ಪ ಬಾವಿ ಮತ್ತು ಫಿಂಗರ್ ಪ್ರಿಂಟ್ ಹಾಗೂ ಟೆಕ್ನಿಕಲ್ ಶೆಲ್ಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವು ಮನೆ ಕಳ್ಳತನ ಪ್ರಕರಣವನ್ನು ಭೇದಿಸಿದೆ.