ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ತುಳುನಾಡಿನಲ್ಲಿ ಆಟಿ ಎಂದರೆ ಅದೊಂದು ಬೇಸಾಯದ ತಿಂಗಳು. ಪ್ರಸ್ತುತ ಗ್ರಾಮೀಣ ಭಾಗದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ಆಟಿ ತಿಂಗಳ ಆಚರಣೆಗಳನ್ನು ಆಚರಿಸುತ್ತಾ ಬರುತ್ತಿದ್ದಾರೆ. ತುಳುನಾಡಿನಲ್ಲಿ ತುಳುವರು ಆಟಿ ತಿಂಗಳಿನ ಸಂದರ್ಭದಲ್ಲಿ ಯಾವುದೇ ಶುಭಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ವಕೀಲ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಕಾಲೇಜ್ನಲ್ಲಿ ತುಳು ಸಂಘ, ಪ್ರಾಚೀನ ವಸ್ತುಗಳ ಪ್ರದರ್ಶನ ಕೇಂದ್ರ, ರೋವರ್ಸ್ ರೇಂಜರ್ಸ್ ಘಟಕ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಟಿಯಲ್ಲಿ ವಿವಿಧ ತಿನಿಸು, ಖಾದ್ಯ ಗಳನ್ನು ಮಾಡಿ ತಿನ್ನುತ್ತಾರೆ. ಹಿಂದಿನ ಕಾಲದಲ್ಲಿ ಈ ತಿಂಗಳ ಸಂಧರ್ಭದಲ್ಲಿ ಹಿರಿಯರು ಬಹಳ ಕಷ್ಟವನ್ನು ಅನುಭವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮೊದಲಿದ್ದ ಕಷ್ಟ ಈಗ ಇಲ್ಲ. ವೈಜ್ಞಾನಿಕ ತಂತ್ರಜ್ಞಾನದ ಕಾರಣದಿಂದಾಗಿ ನಾವು ಬದುಕುವ ಶೈಲಿಯು ಬದಲಾಗುತ್ತಾ ಸಾಗಿದೆ. ಇಂದು ಹೊಲ ಗದ್ದೆಗಳು ಕಣ್ಮರೆಯಾಗುತ್ತಿದೆ. ಇದರಿಂದ ತುಳುನಾಡಿನ ಜನಜೀವನ ಶೈಲಿ, ಆಚರಣಾ ಪದ್ಧತಿಗಳು ಇವೆಲ್ಲವೂ ಮೂಲೆಗೆ ಸೇರುತ್ತಿದೆ ಎಂದು ಹೇಳಿದರು.ಕಾಲೇಜ್ನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿದರು.ವೇದಿಕೆಯಲ್ಲಿ ಕಾಲೇಜ್ನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಕಾಲೇಜ್ನ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.
ತುಳು ಸಂಘದ ಸಂಯೋಜಕಿ ಹಾಗೂ ಉಪನ್ಯಾಸಕಿ ದೀಪಿಕಾ ಎಸ್. ಸ್ವಾಗತಿಸಿದರು. ತುಳು ಸಂಘದ ಅಧ್ಯಕ್ಷ ಆಶಿಶ್ ಆಳ್ವ ವಂದಿಸಿದರು. ವಿದ್ಯಾರ್ಥಿನಿ ತನಿಷಾ ನಿರೂಪಿಸಿದರು.