ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಲಯನ್ಸ್ ಕ್ಲಬ್ ಎಂದರೇ ಒಂದು ರೀತಿ ವಿಶ್ವವಿದ್ಯಾಲಯ ಇದ್ದಂತೆ. ಇಲ್ಲಿ ಸೇವೆ ಎಂಬುದನ್ನು ಮಾತ್ರ ಕಲಿಸಿ ಜೀವಂತವಾಗಿಡುವಂತೆ ಕಲಿಸುತ್ತದೆ ಎಂದು ಲಯನ್ಸ್ ಸೇವಾ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಕೆ.ಜೆ. ನಾಗರಾಜು ತಿಳಿಸಿದರು.ನಗರದ ಕುವೆಂಪು ರಸ್ತೆ ಬಳಿ ಇರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರದೇಶದ ಅಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೇವೆ ಮಾಡುವುದು ದೇವರ ಆರಾಧಿಸುವ ಮಾರ್ಗವಾಗಿದೆ. ಬಡವರು ಎಂದರೇ ದೇವರ ಪ್ರತಿನಿಧಿಗಳು ಎಂಬುದಾಗಿ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಹಿಂದಿನ ಮಾತುಗಳು ಪ್ರಸ್ತೂತದಲ್ಲಿ ನಮ್ಮ ಲಯನ್ಸ್ ಕ್ಲಬ್ಗೆ ಅನ್ವಯಿಸುತ್ತದೆ. ಸೇವೆ ಮಾಡುವುದಕ್ಕಾಗಿ ಈ ಲಯನ್ಸ್ ಸಂಸ್ಥೆ ಜನ್ಮತಾಳಿದೆ. ಲಯನ್ಸ್ ಸಂಸ್ಥೆಯಲ್ಲಿ ಇದುವರೆಗೂ ಅಧ್ಯಕ್ಷರಾದವರು ಎಲ್ಲಾ ಸೇವೆಯಂತಹದನ್ನು ಮೈಗೂಡಿಸಿಕೊಂಡು ಮುನ್ನಡೆಸಿಕೊಂಡು ಬಂದಿದ್ದಾರೆ ಎಂದರು.ಲಯನ್ಸ್ ಸಂಸ್ಥೆ ಪ್ರಾರಂಭವಾಗಿ 200 ದೇಶಗಳಲ್ಲಿ ಇಲ್ಲಿವರೆಗೂ ವಿವಿಧ ರೀತಿಯ ಸೇವೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ವಾತವರಣ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು. ಸಣ್ಣ ಹಳ್ಳಿಗಳಿಂದ ದೊಡ್ಡ ದೊಡ್ಡ ಪಟ್ಟಣದವರೆಗೂ ಲಯನ್ಸ್ ಸೇವೆಯಂತಹ ಕೆಲಸ ಮಾಡಿಕೊಂಡು ಬರುತ್ತಿದೆ. ಈ ಸಂಸ್ಥೆ ಹುಟ್ಟಿಕೊಂಡಿರುವುದು ಲಾಭರಹಿತ ಹಾಗೂ ದಾನಿಗಳೂ ನೀಡುವ ದಾನಗಳಿಂದ ಅದರ ಕಾರ್ಯಕ್ಷೇತ್ರವನ್ನು ವಿಸ್ತಾರ ಮಾಡುವುದಾಗಿದೆ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಪವರ್ ಲಿಫ್ಟಿಂಗ್ನಲ್ಲಿ ಸಾಧನೆ ಮಾಡಿದ ಸಂತೋಷ್ ಶೆಟ್ಟಿ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಇದೆ ವೇಳೆ ಗೌರವದಿಂದ ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸೇವಾ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷರ ಪತ್ನಿ ಲೀಲಾವತಿ ನಾಗರಾಜು, ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್, ಖಜಾಂಚಿ ಸಿ.ಬಿ. ನಾಗರಾಜು, ಮಾಜಿ ಅಧ್ಯಕ್ಷ ಎಚ್.ಕೆ. ನಾಗೇಶ್, ಲಿಯೋ ಕ್ಲಬ್ ಅಧ್ಯಕ್ಷೆ ಸುವರ್ಚಲಾ ಇತರರು ಉಪಸ್ಥಿತರಿದ್ದರು.