ಸಸ್ಯಕಾಶಿ ಕಪ್ಪತ್ತಗುಡ್ಡದಲ್ಲಿ‌ ಪ್ರವಾಸಿಗರಿಗೆ ಸಫಾರಿ ವಾಹನ

| Published : Aug 15 2025, 01:00 AM IST

ಸಸ್ಯಕಾಶಿ ಕಪ್ಪತ್ತಗುಡ್ಡದಲ್ಲಿ‌ ಪ್ರವಾಸಿಗರಿಗೆ ಸಫಾರಿ ವಾಹನ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ತಾಲೂಕಿನ ಬಳಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯದಲ್ಲಿ ಪ್ರವಾಸಿಗರಿಗೆ ಸಫಾರಿಗೆ ಮುಹೂರ್ತ ನಿಗದಿಯಾಗಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ:ಮುಂಡರಗಿ ತಾಲೂಕಿನ ಬಳಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯದಲ್ಲಿ ಪ್ರವಾಸಿಗರಿಗೆ ಸಫಾರಿಗೆ ಮುಹೂರ್ತ ನಿಗದಿಯಾಗಿದೆ.

ಮುಂಡರಗಿ ತಾಲೂಕಿನ ವ್ಯಾಪ್ತಿಗೆ ಬರುವ ಶುದ್ಧ ಹಬೆಯ ತಾಣವಾಗಿರುವ ಕಪ್ಪತ್ತಗುಡ್ಡದಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್

ಇವರ ಸಹಯೋಗದಲ್ಲಿ ಕಪ್ಪತ್ತಗುಡ್ಡ ವನ್ಯಜೀವಿಧಾಮದ ಸಫಾರಿ ವಾಹನಗಳ ಉದ್ಘಾಟನಾ ಸಮಾರಂಭ ಆ.15 ರಂದು ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಧಿಕೃತವಾಗಿ ಸಚಿವ ಎಚ್.ಕೆ. ಪಾಟೀಲ್ ಚಾಲನೆ ನೀಡಲಿದ್ದಾರೆ.

ರಾಜ್ಯದಲ್ಲಿ ಬನ್ನೇರುಘಟ್ಟ, ಶಿವಮೊಗ್ಗ ನಂತರ ಸಫಾರಿ ಉತ್ತರ ಕರ್ನಾಟಕದ ಮೊದಲ ಸಫಾರಿ ಎಂಬ ಕೀರ್ತಿಗೆ ಇದು ಪಾತ್ರವಾಗಲಿದೆ. ಕಪ್ಪತ್ತಗುಡ್ಡಕ್ಕೆ ಸಾಕಷ್ಟು ಜನ ಇಲ್ಲಿಗೆ ಭೇಟಿ ಕೊಡಬಹುದು ಎಂದು ಮುಂಡರಗಿ ಕಪ್ಪತ್ತಗುಡ್ಡ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ಭರವಸೆ ವ್ಯಕ್ತಪಡಿಸಿದರು.

ಗುಡ್ಡದ ಒಡಲಾಳದಲ್ಲಿರುವ ರಮಣೀಯ ತಾಣಗಳು:

ಗುಡ್ಡಲ್ಲಿರುವ ಮಂಜಿನ ಡೋಣಿ, ಅಲದ ಕೆರೆ, ಕರಡಿಕೊಳ್ಳ, ಹುಲಿಗುಡ್ಡ, ಹಟ್ಟಿ ಲಕ್ಕವ್ವನ ಕೆರೆ, ಕಲ್ಲಡೋಣಿ, ಬೆಕ್ಕಿನ ಚಿರಲಿ ಕೊಳ್ಳ, ಪಾತಾಳ ಗಂಗೆ, ಹಾಗಲಬಿತ್ತಿ ಕೆರೆ, ಆರಿಕೊಳ್ಳ, ಬೇಡರ ಕೊಳ್ಳ, ಏಳು ಕೊಳ್ಳ, ನವಿಲು ಕೊಳ್ಳ, ಬಿದರಿ ಕೊಳ್ಳ, ಜವುಳು ಕೊಳ್ಳ, ನರಿ ಒರತೆ ಕೊಳ್ಳ, ಹುರಾಸಿಕೊಳ್ಳ ಮೊದಲಾದ ಕೆರೆ ಸರೋವರಗಳು ಮಳೆಗಾಲದಲ್ಲಿ ರಮಣೀಯವಾಗಿ ತುಂಬಿ ಹರಿಯುತ್ತವೆ. ಇಲ್ಲಿರುವ ಅನೇಕ ಕೆರೆ-ಕೊಳ್ಳಗಳ ಹೆಸರುಗಳು ಪ್ರಾಕೃತಿಕ ಜೀವ ವೈವಿಧ್ಯತೆಯ ಜೀವ ಸಂಕುಲದ ಇರುವಿಕೆಯನ್ನು ಸಾಕ್ಷಿಕರಿಸುತ್ತಿವೆ.

ಸಸ್ಯ ಸಂಪತ್ತು: ಬಹು ವಿಧದ ಸಸ್ಯ ವನಸ್ಪತಿಗಳಾದ ಕಾಮಕಸ್ತೂರಿ, ಹೊನ್ನವರಿ, ಮಧುನಾಶಿನಿ(ಮಧುಮೇಹ ನಿಯಂತ್ರಣ) ಗುಲಗಂಜಿ, ಅಡವಿಸೋಗಿ, ನಕರಿ, ಬಿಕ್ಕೆಹಣ್ಣು, ಕದಂಬಸೋನ್ನಕೆ, ಕಾಡಿಗರಗ, ಮದುಗುಣಕಿ, ಮುಟ್ಟಿದರೆ ಮುನಿಗಿಡ ಒಳಮುಚ್ಚವುದು ಮತ್ತು ಹೊರಮುಚ್ಚುವ ಸಸ್ಯ, ಶಿಖಮಾಚಿಪತ್ರಿ ಇಂತಹ 375ಕ್ಕೂ ಹೆಚ್ಚು ಔಷಧ ಸಸ್ಯಗಳನ್ನು ಒಳಗೊಂಡಿದೆ.

ಪ್ರಾಣಿಗಳು:ಪುನುಗು ಬೆಕ್ಕು, ಚುಕ್ಕೆ ಜಿಂಕೆ, ಕೃಷ್ಣಮೃಗ ಕೊಂಡುಕುರಿ, ಮುಳ್ಳುಹಂದಿ, ಕಾಡುಹಂದಿ, ಚಿರತೆ, ನರಿ, ಕತ್ತೆ ಕಿರುಬ, ತೋಳ, ಕಪ್ಪತ್ತಗುಡ್ಡದಲ್ಲಿ ಮಾತ್ರ ಕಾಣಿಸಿಗುವ ಜಿಂಕಾರ, ಚೌಸಿಂಘಾ. ಪೇಗ್ವಲೀನ, ಇಂಡಿಯನ್ ಸಿಬೇಟ ಕ್ಯಾಟ್, ಏಸಿಯನ್ ಕ್ಯಾಟ್, ನಕ್ಷತ್ರ ಆಮೆ, ನವಿಲು, ಹದ್ದುಗಳು, ಜೇನುನೊಣ, ವಲಸೆ ಹಕ್ಕಿಗಳು ಸರೀಸೃಪಗಳು ಹಲ್ಲಿ, ನಾಗರಹಾವು, ಮಂಡಲ ಹಾವು 20 ಸಸ್ತನಿ ಜಾತಿಗಳು ಮತ್ತು 225 ಪಕ್ಷಿ ಪ್ರಭೇದಗಳ ನೆಲೆಯಾಗಿರುವ ಕಪ್ಪತ್ತಗುಡ್ಡ ವೀಕ್ಷಣೆಗೆ ಬರುವ ಪ್ರವಾಸಿಗರು ಸಫಾರಿ ಮೂಲಕ ಪರಿಸರವಾದಿಗಳಿಗೆ ಕಪ್ಪತ್ತಗುಡ್ಡದ ವೀಕ್ಷಣೆ ಮತ್ತೊಂದಿಷ್ಟು ರಮಣೀಯವಾಗಲಿದೆ.

ಕಪ್ಪತ್ತಗುಡ್ಡದಲ್ಲಿ ಸಫಾರಿ ಮೂಲಕ ಪರಿಸರ ಮತ್ತು ಪ್ರಾಣಿಗಳ ವೀಕ್ಷಣೆಯಿಂದ ಪ್ರವಾಸಿಗರಿಗೆ ನಮ್ಮಸುತ್ತಮುತ್ತಲಿನ ಪರಿಸರವನ್ನು ಬೆಳೆಸಬೇಕು, ನಾವು ಉತ್ತಮ ವಾತಾವರಣದಲ್ಲಿ ಇರಬೇಕು, ಮುಂದಿನ ಪೀಳಿಗೆ ಆರೋಗ್ಯವಾಗಿರಲು ಸಾಧ್ಯ ಎನ್ನುವ ಮನೋಭಾವನೆ ಮೂಡುತ್ತದೆ. ಕಪ್ಪತ್ತಮಲ್ಲಯ್ಯ ಜಾತ್ರಾಮಹೋತ್ಸವದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದು ಮುಂಡರಗಿ ತಾಲೂಕು ಕಪ್ಪತ್ತಗುಡ್ಡ ವಲಯ ಅರಣ್ಯ ಅಧಿಕಾರಿ ಮಂಜುನಾಥ ಮೇಗಲಮನಿ ಹೇಳಿದರು.

ಕಪ್ಪತ್ತಗುಡ್ಡ ಶುದ್ಧ ಹಬೆಯ ಕೇಂದ್ರವಾಗಿದ್ದು, ಉತ್ತಮ ಪರಿಸರದಿಂದ ನಾವು ಚೆನ್ನಾಗಿ ಇರಬಹುದು ಎನ್ನುವ ಮನೋಭಾವ ಪ್ರತಿಯೊಬ್ಬನಾಗರಿಕರಲ್ಲಿ ಮೂಡಿಸುತ್ತದೆ. ಆ ಹಿನ್ನೆಲೆಯಲ್ಲಿ ಮಾನವ ಮತ್ತು ಜೀವ ಸಂಕುಲ ಉಳಿವಿಗಾಗಿ ಪರಿಸರ ಉಳಿಸಿ ಬೆಳೆಸಬೇಕಾಗಿದೆ. ಪ್ರವಾಸಿಗರು ಸಫಾರಿ ಪರ್ಯಟನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಗದಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಹೇಳಿದರು.