-ಚನ್ನಮ್ಮನಾಗತಿಹಳ್ಳಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ

----

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಸಕರಾತ್ಮವಾಗಿ ಸ್ಪಂದಿಸುವ ಹೃದಯವಂತರು ನಮ್ಮ ಸಮಾಜದಲ್ಲಿ ಇದ್ದಾರೆಂಬುವುದೇ ಸಂತಸ ವಿಷಯವೆಂದು ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆನಂದಕುಮಾರ್ ತಿಳಿಸಿದರು.

ಅವರು, ಚನ್ನಮ್ಮನಾಗತಿಹಳ್ಳಿ ಸರ್ಕಾರಿ ಆರೋಗ್ಯ ಕೇಂದ್ರ ಆವರಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಳೆದ ಹಲವಾರು ವರ್ಷಗಳಿಂದ ಮತ್ಸಮುದ್ರ ಸಿಡಿಲಸಂತಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಪ್ರತಿವರ್ಷ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಆರೋಗ್ಯ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಇಂತಹ ಸೇವಾ ಕಾರ್ಯಗಳಿಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.

ಗ್ರಾಮೀಣ ಭಾಗಗಳಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ ತಜ್ಞ ವೈದ್ಯರ ತಂಡ ಕರೆಸಿ ಆರೋಗ್ಯ ತಪಾಸಣೆ ಮಾಡುವ ಮೂಲಕ ಈ ಭಾಗದ ಜನರು ನೆಮ್ಮದಿಯಿಂದ ಬದುಕುವಂತೆ ಮಾಡುವ ಕಾರ್ಯವನ್ನು ಮತ್ಸಮುದ್ರ ಸಿಡಿಲಸಂತಸ್ವಾಮಿವಿವೇಕಾನಂದ ಸೇವಾ ಸಂಸ್ಥೆ, ಎಸ್‌ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ದಾವಣಗೆರೆ, ವೈದೇಹಿ ಆಸ್ಪತ್ರೆ ಬೆಂಗಳೂರು, ಗ್ರಾಮ ಪಂಚಾಯಿತಿ ಆಡಳಿತ ಚನ್ನಮ್ಮನಾಗತಿಹಳ್ಳಿ ಆಯೋಜಿಸಿರುವುದು ಸಂತಸ ತಂದಿದೆ ಎಂದರು.

ಗ್ರಾಮ ಪಂಚಾಯಿತಿ ಆಡಳಿತ ಮತ್ತು ಇತರೆ ಸಂಘ, ಸಂಸ್ಥೆಗಳಿಂದ ಪರಶುರಾಮಪುರ ಪೊಲೀಸ್ ಠಾಣೆ ಪಿಎಸ್‌ಐ ಆಗಿ ಕಾರ್ಯನಿರ್ವಹಿಸಿ ಪ್ರಸ್ತುತ ಕೆಜಿಎಫ್‌ನಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಅರ್ಜುನ್‌ ಲಿಂಗಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಪರಶುರಾಮಪುರ ಮತ್ತು ಚಳ್ಳಕೆರೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಈ ಭಾಗದ ಜನರು ಎಲ್ಲಾ ರೀತಿ ಸಹಕಾರ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ, ಸನ್ಮಾನಿಸಿರುವುದು ಸಂತಸ ತಂದಿದೆ. ಪೊಲೀಸ್ ಇಲಾಖೆಯಲ್ಲಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುವ ಕೆಲಸ ಸುಲಭ ಸಾಧ್ಯವಾಗಲ್ಲ. ಆದರೂ ಈ ಭಾಗದ ಜನರು ನನ್ನನ್ನು ಆಹ್ವಾನಿಸಿ ಸನ್ಮಾನಿಸಿರುವುದು ಸಂತಸ ತಂದಿದ್ದರೂ ನನ್ನ ಜವಾಬ್ಧಾರಿ ಸಹ ಹೆಚ್ಚಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ದಳಪತಿ ಭೀಮಣ್ಣ, ಬಿ.ತಿಪ್ಪೇಸ್ವಾಮಿ, ಎಎಸ್‌ಐ ತಿರುಕಪ್ಪ, ವೀರಭದ್ರಪ್ಪ, ಡಾ.ರಘುನಂದನ್, ಡಾ.ಮಂಜುನಾಥ, ಡಾ.ಲೋಕನಾಥ, ಎ.ಚಲ್ಮೇಶ, ಕೆ.ಸಿ.ಮಹೇಶ, ಕರಿಯಣ್ಣ, ಮಂಜುನಾಥ, ಪಿಡಿಒ ಕರ‍್ಲಯ್ಯ ಮುಂತಾದವರು ಉಪಸ್ಥಿತರಿದ್ದರು.

-----

ಪೋಟೋ: ೮ಸಿಎಲ್‌ಕೆ೩

ಚಳ್ಳಕೆರೆ ನಗರದ ಚನ್ನಮ್ಮನಾಗತಿಹಳ್ಳಿ ಸರ್ಕಾರಿ ಆರೋಗ್ಯ ಕೇಂದ್ರ ಆವರಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.