ಶರಣರ ನಡೆ ನುಡಿಗಳು ಈ ದೇಶದ ಇತಿಹಾಸಕ್ಕೆ ದೊಡ್ಡ ಕೊಡುಗೆ

| Published : Oct 09 2024, 01:36 AM IST

ಶರಣರ ನಡೆ ನುಡಿಗಳು ಈ ದೇಶದ ಇತಿಹಾಸಕ್ಕೆ ದೊಡ್ಡ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಕ ಸಂಸ್ಕೃತಿಯ ಪ್ರತಿನಿಧಿಗಳಾಗಿ ಇಡೀ ನಾಡ ತುಂಬ ಪ್ರಗತಿಪರ ಹೆಜ್ಜೆ ಗುರುತುಗಳನ್ನು ಮೂಡಿಸಿದ ಶರಣರ ನಡೆ ನುಡಿಗಳು ಈ ದೇಶದ ಸಾಂಸ್ಕೃತಿಕ ಸಾಹಿತ್ಯಕ ಇತಿಹಾಸಕ್ಕೆ ದೊಡ್ಡ ಕೊಡುಗೆ ಎಂದು ನ್ಯಾಯವಾದಿ ಎಂ.ಎಸ್. ಹುಲ್ಲೂರ ತಿಳಿಸಿದರು.

ಹಾನಗಲ್ಲ: ಕಾಯಕ ಸಂಸ್ಕೃತಿಯ ಪ್ರತಿನಿಧಿಗಳಾಗಿ ಇಡೀ ನಾಡ ತುಂಬ ಪ್ರಗತಿಪರ ಹೆಜ್ಜೆ ಗುರುತುಗಳನ್ನು ಮೂಡಿಸಿದ ಶರಣರ ನಡೆ ನುಡಿಗಳು ಈ ದೇಶದ ಸಾಂಸ್ಕೃತಿಕ ಸಾಹಿತ್ಯಕ ಇತಿಹಾಸಕ್ಕೆ ದೊಡ್ಡ ಕೊಡುಗೆ ಎಂದು ನ್ಯಾಯವಾದಿ ಎಂ.ಎಸ್. ಹುಲ್ಲೂರ ತಿಳಿಸಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆದರ್ಶ ಸಂಸ್ಕೃತಿಯ ಸರಳ ನಿರೂಪಣೆ, ಸ್ವಚ್ಛಂದ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳಕು ಚೆಲ್ಲಿದ ವಚನಕಾರರು ಮಾನವನಿಗೆ ದಟ್ಟ ಅನುಭವ ನೀಡಿದ್ದಾರೆ. ಗಂಭೀರ ಸಂವಾದವೂ ಸೇರಿ ವಿಶಾಲ ತಾತ್ವಿಕ ಚಿಂತನೆಗಳನ್ನು ನೀಡಿದ ಅವರ ಹಾದಿ ಮನು ಕುಲಕ್ಕೆ ಸದಾ ಪ್ರೇರಣೆದಾಯಕವಾದುದು ಎಂದರು.ಶರಣರ ಸತ್ಯ ಸಂದೇಶಗಳ ಕುರಿತು ಉಪನ್ಯಾಸ ನೀಡಿದ ಶರಣೆ ಅಕ್ಕಮ್ಮ ಶೆಟ್ಟರ, ಕಾಯಕಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ. ಸ್ತ್ರೀವಾದದ ಸಂದರ್ಭದಲ್ಲಿ ಜಾಗೃತವಾದ ಸಂದೇಶಗಳನ್ನು ನೀಡಿದ ವಚನಕಾರರು ಸಮಾನತೆಯ ದೊಡ್ಡ ಶಕ್ತಿಯಾಗಿದ್ದರು. ಅಸಮಾನತೆಯ ನಿವಾರಣೆಗಾಗಿ ನಡೆದ ಹೋರಾಟದಲ್ಲಿ ಶರಣರು ಸಂಕಷ್ಟಗಳಿಗೆ ಗುರಿಯಾದರು. ಸತ್ಯದ ಗೆಲುವಿಗೆ ಬದ್ಧರಾಗಿ ಶಿವಭಕ್ತಿಯ ಶ್ರೇಷ್ಠ ಸಂದೇಶಗಳನ್ನು ಅರುಹಿದರು. ಸಮಾಜವನ್ನು ತಿದ್ದಿ ತೀಡಿ ಮುನ್ನಡೆಸಿದ ವಚನಕಾರರಿಗೆ ಜಾತ್ಯತೀತ ನಿಲುವು ಇನ್ನಷ್ಟು ಪುಷ್ಟಿ ನೀಡಿತು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಶರಣ ಸಾಹಿತ್ಯ ಪರಿಷತ್ತು ಶರಣರ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಕ್ರಿಯಾಶೀಲ ಸಂಘಟನೆ. ಈ ಮೂಲಕ ಮಕ್ಕಳು ಯುವಕರ ಮನಸ್ಸಿನಲ್ಲಿ ಸರಳ ಸಾತ್ವಿಕ ಜೀವನದ ಸಂದೇಶಗಳನ್ನು ಪಸರಿಸುತ್ತಿದೆ. ನಾಳೆಯ ನಮ್ಮ ಬದುಕಿನ ಹಿತಕ್ಕೆ ಇಂದೇ ಧರ್ಮ ಸಂಸ್ಕೃತಿಯ ಜೀವನ ವಿಧಾನವನ್ನು ಅನುಸರಿಸುವಂತಾಗಬೇಕು ಎಂದರು.ನಗರ ಘಟಕದ ಉಪಾಧ್ಯಕ್ಷ ಅಶೋಕ ದಾಸರ ಪ್ರಾಸ್ತಾವಿಕ ಮಾತನಾಡಿದರು. ಗೌರವಾಧ್ಯಕ್ಷ ರವಿಬಾಬು ಪೂಜಾರ, ಕಾರ್ಯದರ್ಶಿ ಪ್ರವೀಣ ಬ್ಯಾತನಾಳ, ಜಿಲ್ಲಾ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ, ತಾಲೂಕು ಅಧ್ಯಕ್ಷ ಎಸ್.ಸಿ.ಕಲ್ಲನಗೌಡರ, ಶಿಕ್ಷಕ ಬಿ.ಎಂ.ಸಂಗೂರ, ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ರೇಖಾ ಶೆಟ್ಟರ, ನಿರ್ಮಲಾ ಮಹಾರಾಜಪೇಟೆ, ಸುವರ್ಣ ಹಿರೇಗೌಡರ, ಅನಿತಾ ಕಿತ್ತೂರ, ಪಲ್ಲವಿ ಮಿರ್ಜಿ, ಸುಮಂಗಲಾ ಕಟ್ಟಿಮಠ, ಸಿದ್ದಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸುಜಾತಾ ನಂದೀಶೆಟ್ಟರ ವಚನ ಪ್ರಾರ್ಥನೆ ಮಾಡಿದರು. ಶೋಭಾ ಪಾಟೀಲ ಸ್ವಾಗತಿಸಿದರು. ಲಕ್ಷ್ಮಿ ಓಂಕಾರಿ ಕಾರ್ಯಕ್ರಮ ನಿರೂಪಿಸಿದರು. ರೇಖಾ ಶೆಟ್ಟರ ವಂದಿಸಿದರು.