ಚಾಮರಾಜನಗರ: ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಶಾಲೆಗೆ ಕೀರ್ತಿ ತರಬೇಕು. ಹೆಚ್ಚಿನ ಶಿಕ್ಷಣದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಬಸವಪುರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಜಿ.ಶಿವಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಬಸವಾಪುರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೫- ೨೦೨೬ನೇ ಸಾಲಿನ ೮ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಶಾರದಾ ಮಾತೆ ಪೂಜಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಿತ ವಚನ ಹೇಳಿದರು. ಈ ಶಾಲೆಯಲ್ಲಿ ಸುಮಾರು ೮ ವರ್ಷಗಳ ಕಾಲ ವಿದ್ಯಾಭ್ಯಾಸ ಮುಗಿಸಿ ೯ನೇ ತರಗತಿಗೆ ಬೇರೆ ಶಾಲೆಗೆ ಹೊಗುತ್ತಿದ್ದೀರಿ, ಎಲ್ಲಾ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಯಬೇಕು, ಶಿಕ್ಷಣವು ನಿಮ್ಮ ಬದುಕನ್ನು ಉತ್ತಮವಾಗಿಸುತ್ತದೆ ಎಂದು ತಿಳಿಹೇಳಿದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸಿ. ಮಲ್ಲಿಕಾರ್ಜುನ ಅವರು ಮಾತನಾಡಿ, ಮನೆಯಲ್ಲಿ ತಾಯಿ, ತಂದೆಗೆ ಗೌರವ ಕೊಡುವುದು ಒಂದು ಶಿಕ್ಷಣ, ಮನೆಯೇ ಮೊದಲ ಪಾಠಶಾಲೆ, ನಂತರ ಶಾಲೆಯಲ್ಲಿ ನಿಮ್ಮ ವಿದ್ಯಾಭ್ಯಾಸ ಪ್ರಾರಂಭವಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದರೆ ಶಿಕ್ಷಣ ನಿಮಗೆ ವರದಾನವಾಗಲಿದೆ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಗುರುವಂದನೆ ನಡೆಸಿಕೊಟ್ಟರು. ಕಾಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಭುಸ್ವಾಮಿ, ಉಪಾಧ್ಯಕ್ಷೆ ಮಂಗಳಗೌರಿ, ಸದಸ್ಯರಾದ ಮಹದೇವಯ್ಯ, ಶಾಲಾ ಶಿಕ್ಷಕರಾದ ಆರ್.ವಿನೋದ್, ಟಿಜಿಟಿ ದೈಹಿಕ ಶಿಕ್ಷಣ ಶಿಕ್ಷಕ ಪಿ.ಗೋವಿಂದನ್, ಪಿಎಸ್.ಟಿ ಶಿಕ್ಷಕರಾದ ಮಹದೇವಪ್ರಸಾದ್, ಜ್ಯೋತಿ, ಜಿ.ಪಿ.ಟಿ ಶಿಕ್ಷಕರಾದ ಕೆ.ಪ್ರವೀಣ್ ಹಾಗೂ ಶಾಲಾ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.