ಕನ್ನಡಪ್ರಭ ವಾರ್ತೆ ಮಂಡ್ಯ
ಕಂದಾಯ ಇಲಾಖೆ ನೌಕರರು ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದಿಂದ ಕಂದಾಯ ನೌಕರರ ಸಂಘದ ಭವನ ಹಾಗೂ ಜಿಲ್ಲಾ ಕಂದಾಯ ಇಲಾಖೆ ನೌಕರರ ಮತ್ತು ನಿವೃತ್ತ ನೌಕರರ ಗೃಹ ನಿರ್ಮಾಣ ಕಚೇರಿ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಉತ್ತಮವಾದ ಕಟ್ಟಡವನ್ನು ನಿರ್ಮಿಸಿಕೊಂಡಿದ್ದೀರಿ. ಕಟ್ಟಡದ ಸದ್ಭಳಕೆಯಾದಾಗ ಸಾರ್ಥಕತೆ ಪಡೆಯುತ್ತದೆ. ಕಂದಾಯ ಇಲಾಖೆ ನೌಕರರು ತಮ್ಮ ವೈಯಕ್ತಿಕ ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕೆ ತೋರುವಷ್ಟೇ ಆಸಕ್ತಿಯನ್ನು ಸಾರ್ವಜನಿಕರ ಕೆಲಸದ ಮೇಲೂ ತೋರಿಸಬೇಕು. ಜನರನ್ನು ಅಲೆದಾಡಿಸದೆ ಸಕಾಲದಲ್ಲಿ ಅವರ ಕೆಲಸ-ಕಾರ್ಯಗಳನ್ನು ಮಾಡಿಕೊಡುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ನೌಕರರ ಪರಿಶ್ರಮದಿಂದ ಈ ಕಟ್ಟಡ ನಿರ್ಮಾಣವಾಗಿದೆ. ನಿವೃತ್ತಿ ಹೊಂದಿರುವ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಟ್ಟಡ ಮಾಡಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಎಲ್ಲಾ ಕಂದಾಯ ಇಲಾಖೆಯ ನೌಕರರು ನಿಷ್ಠೆಯಿಂದ ಕೆಲಸ ಮಾಡಬೇಕು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು ಶ್ರೀನಿಶ್ಚಲಾನಂದನಾಥಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ರಾಜ್ಯ ಸಹಕಾರಿ ಕಂದಾಯ ಇಲಾಖೆ ನೌಕರ ಸಂಘದ ಜಿಲ್ಲಾಧ್ಯಕ್ಷ ಡಿ. ತಮ್ಮಣ್ಣಗೌಡ ಉಪಸ್ಥಿತರಿದ್ದರು.
ಸೇವಾಕಿರಣ ವೃದ್ಧಾಶ್ರಮದಲ್ಲಿ ದಿ.ಶರತ್ ಕುಮಾರ್ ಸಂಸ್ಮರಣೆ; ಗೀತಗಾಯನ
ಮಂಡ್ಯ:ಸೇವಾ ಕಿರಣ ವೃದ್ಧಾಶ್ರಮದಲ್ಲಿ ಕಲಾವಿದ ಸಂತೆಕಸಲಗೆರೆ ಬಸವರಾಜು ಪುತ್ರ ದಿ.ಶರತ್ ಕುಮಾರ್ ಅವರ ಸಂಸ್ಮರಣೆ ಅಂಗವಾಗಿ ಗೀತಗಾಯನ ನಡೆಯಿತು.
ಹಿರಿಯ ಪತ್ರಕರ್ತ, ಕಲಾವಿದ ಡಿ.ದೇವರಾಜ್ ಕೊಪ್ಪಮಾತನಾಡಿ, ಬಸವರಾಜು ತಮ್ಮ ಮಗನ ನೆನಪಿನಲ್ಲಿ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಿಸಿಕೊಳ್ಳುತ್ತಿರುವುದು ಆದರ್ಶ ಹಾಗೂ ಅನುಕರಣೀಯ. ಹುಟ್ಟಿನೊಂದಿಗೆ ಸಾವೂ ಕೂಡ ಹುಟ್ಟುತ್ತದೆ. ಬದುಕಿರುವವರೆಗೂ ನಮ್ಮ ಜೊತೆಯಲ್ಲಿರೋದು ಸಾವು ಮಾತ್ರ. ಹಾಗಾಗಿ ಸಾವಿಗೆ ದುಃಖ ಪಡುವ ಬದಲು ಹೀಗೆ ಸಮಾಜಮುಖಿ ಕೆಲಸ ಮಾಡೋದು ಒಳ್ಳೆಯದು ಎಂದರು.ಸೇವಾ ಕಿರಣ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಜಿ.ವಿ.ನಾಗರಾಜು ಮಾತನಾಡಿ, ಹುಟ್ಟಿದ ಎಲ್ಲರೂ ಸಾಯಲೇಬೇಕು. ಸಾವು ಖಚಿತ ಎಂದಾಗ ಬದುಕಿರುವ ಕಾಲದಲ್ಲಿ ಸಮಾಜಕ್ಕೆ ಬೆಳಕಾಗಬೇಕು. ಆ ಬದುಕೇ ಸಾರ್ಥಕ. ಆಶ್ರಮದ ವೃದ್ಧರಿಗೆ ಇಂತಹ ಕಾರ್ಯಕ್ರಮಗಳು ಜೀವನದಲ್ಲಿ ಆತ್ಮವಿಶ್ವಾಸ ತುಂಬುತ್ತವೆ. ಕಲಾವಿದರು ಹಾಡಿದಾಗ ಒಂದಷ್ಟು ಕಾಲ ತಮ್ಮ ನೋವನ್ನು ಮರೆಯುತ್ತಾರೆ. ಇದೊಂದು ಉತ್ತಮ ಕಾರ್ಯಕ್ರಮ ಎಂದರು.ವೇದಿಕೆಯಲ್ಲಿ ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಚಿಕ್ಕಗಾಡಿಗನಹಳ್ಳಿ ಪರಮೇಶ್, ಮಂಜುಳಶೇಖರ್, ರವಿ, ಕಲಾವಿದರಾದ ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್ ಇದ್ದು ಗೀತಗಾಯನ ನಡೆಸಿಕೊಟ್ಟರು. ಆಶ್ರಮದ ವೃದ್ಧರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.