ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಸಮಾಜ ಅಭಿವೃದ್ಧಿಯಾಗುತ್ತಿದೆ, ವಿದ್ಯಾವಂತ ಜನರಿದ್ದಾರೆ. ಸಮಾಜದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆಯಿದ್ದು, ಈ ನಂಬಿಕೆಗೆ ಯಾವುದೇ ಚ್ಯುತಿ ಬರದಂತೆ ನಡೆದುಕೊಳ್ಳಬೇಕು ಎಂದು ನೂತನ ನ್ಯಾಯಮೂರ್ತಿ ಮೊಹಮ್ಮದ್‌ ಅಲಿ ನಾಯ್ಕ ಹೇಳಿದರು.

ಪಟ್ಟಣದ ನ್ಯಾಯವಾದಿಗಳ ಸಂಘದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ ಸ್ವಾಗತ ಕಾರ್ಯಕ್ರಮದಲ್ಲಿ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಏನೇ ಭಿನ್ನತೆಗಳಿದ್ದರೂ ಅವುಗಳನ್ನು ಪಕ್ಕಕ್ಕೆ ಇಟ್ಟು ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು ಎಂದರು.

ನ್ಯಾಯವಾದಿಗಳು ಕಲಾಪದಲ್ಲಿ ಸಮಯ ನೀಡುವಂತೆ ಬೇಡಿಕೆ ಇಡದೇ ಪ್ರತಿ ಪ್ರಕರಣದಲ್ಲಿ ಅಥವಾ ಕಲಾಪದಲ್ಲಿ ಸರಿಯಾದ ಮಾರ್ಗವನ್ನು ಅನುಸರಿಸಬೇಕು. ಇದರಿಂದ ನಮಗೂ ಕೆಲಸ ನೀಡಿದಂತಾಗುತ್ತದೆ. ಅಲ್ಲದೇ ಹೆಚ್ಚಿನ ಅನುಭವ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ನೂತನವಾಗಿ ನ್ಯಾಯವಾದಿ ವೃತ್ತಿ ಆರಂಭಿಸಿದ ಕಿರಿಯರಿಗೆ ಒಳ್ಳೆಯ ಮಾರ್ಗದರ್ಶನ ನೀಡಿ, ಅವರನ್ನು ನ್ಯಾಯಾಂಗ ವ್ಯವಸ್ಥೆಯ ಕುರಿತು ತಿಳಿ ಹೇಳಿ ಅವರಿಗೂ ಕೆಲಸ ಕಾರ್ಯ ನೀಡಿ. ಕಲಾಪದ ವೇಳೆಯಲ್ಲಿ ಕಿರಿಯ ನ್ಯಾಯವಾದಿಗಳು ಏನಾದರೂ ತಪ್ಪು ತಡೆಯಾದರೂ ಸಹ ನಮ್ಮ ಗಮನಕ್ಕೆ ತಂದು ಅವುಗಳನ್ನು ಸರಿಪಡಿಸಿಕೊಳ್ಳಿ ಎಂದು ಕಿವಿ ಮಾತನ್ನು ಹೇಳಿದರು.ಯಾವುದೇ ಪ್ರಕರಣಗಳಿದ್ದರೂ ಸಹ ಕಾನೂನಾತ್ಮಕವಾಗಿ ನಾನು ಆದೇಶ ಹೊರಡಿಸುತ್ತೇನೆ, ನಿಮ್ಮ ನಿಮ್ಮ ವೈಯಕ್ತಿಕ ಯಾವುದೇ ವಿಚಾರವನ್ನು ನನ್ನ ಬಳಿ ತರಬೇಡಿ ಎಂದು ತಿಳಿಸಿದರು.ನಾನು ಕಾರ್ಯನಿರ್ವಹಿಸಿದ ಎಲ್ಲ ನ್ಯಾಯಾಲಯಗಳಲ್ಲಿ ನ್ಯಾಯವಾದಿಗಳಿಂದ ಅನೇಕ ವಿಷಯಗಳಲ್ಲಿ ಅನುಭವ ಪಡೆದಿದ್ದೇನೆ. ಕಲಾಪ ನಡೆಯುವ ಸಂದರ್ಭದಲ್ಲಿ ನ್ಯಾಯವಾದಿಗಳ ಸಹಕಾರ ನಮಗೆ ಅಗತ್ಯವಾಗಿರುತ್ತದೆ ಎಂದರು.ಕಿತ್ತೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿಶ್ವನಾಥ ಬಿಕ್ಕಣ್ಣವರ ಮಾತನಾಡಿ, ಅನೇಕ ಹೋರಾಟಗಳಿಂದ ಕಿತ್ತೂರಿಗೆ ನ್ಯಾಯಾಲಯವನ್ನು ಮಂಜೂರು ಮಾಡಿಸಲಾಗಿದೆ. ಮೊದಲ ಹಂತದಲ್ಲಿ ತಾತ್ಕಾಲಿಕ ನ್ಯಾಯಾಲಯ ನೀಡಲಾಯಿತು. ನಂತರ ಮತ್ತೆ ಶಾಸಕರ ಸಹಕಾರದಿಂದ ಪೂರ್ಣ ಪ್ರಮಾಣದ ನ್ಯಾಯಾಲಯ ಕಿತ್ತೂರಿಗೆ ದೊರಕಿದೆ. ನ್ಯಾಯಾಲಯಕ್ಕೆ ಅವಶ್ಯವಿರುವ ಎಲ್ಲ ಸಹಕಾರವನ್ನು ನ್ಯಾಯವಾದಿಗಳು ನೀಡುತ್ತಾರೆ ಎಂದು ತಿಳಿಸಿದರು.ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಮೋಹನ್ ಸಾಣಿಕೊಪ್ಪ, ಪ್ರ.ಕಾರ್ಯದರ್ಶಿ ಎಂ.ಎಸ್.ಹಂಚಿನಮನಿ, ಸೋಮೇಶ ಮುತ್ತೇಣ್ಣವರ ಮಾತನಾಡಿದರು. ಜೆಎಂಎಫ್‌ಸಿ ನ್ಯಾಯಾಲಯಕ್ಕೆ ನೂತನ ನ್ಯಾಯಾಧೀಶರಾಗಿ ಆಗಮಿಸಿದ ನ್ಯಾಯಾಧೀಶರಾದ ಮೊಹಮ್ಮದ್‌ ಅಲಿ ನಾಯ್ಕ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎ.ಬಿ.ಇನಾಂದಾರ, ಬಿ.ಎಂ.ಬುಡಸೆಟ್ಟಿ, ಲಕ್ಷ್ಮೀ ಹೈಬತ್ತಿ, ವಾಣಿ ತುರಮರಿ, ಆರ್.ಜಿ.ಹಿರೇಮಠ, ಎಸ್.ಎಂ.ಹಳೇಮನಿ, ಆರ್.ಎಸ್.ಚಿಂಚಕಂಡಿ, ಬಿ.ಕೆ.ಸವದತ್ತಿ, ಎನ್.ಬಿ.ಚೌಡಣ್ಣವರ, ಎ.ಬಿ.ಲದ್ದಿಗಟ್ಟಿ, ಬಿ.ಕೆ.ಹೈಬತ್ತಿ, ಕೆ.ಎನ್.ಸರ್ದಾರ, ಎನ್.ಎ.ಮರೆದ ಸೇರಿದಂತೆ ಇತರರು ಇದ್ದರು.