ಕುಷ್ಟಗಿ: ಪಟ್ಟಣದ ಅಡವಿರಾಯ ಮುಖ್ಯ ಪ್ರಾಣೇಶ ದೇವರ ಜಾತ್ರಾಮಹೋತ್ಸವ ಅಂಗವಾಗಿ ರಥೋತ್ಸವವೂ ಭಕ್ತಿ,ಸಂಪ್ರದಾಯ, ಧಾರ್ಮಿಕ ವೈಭವದ ನಡುವೆ ಅದ್ದೂರಿಯಾಗಿ ನಡೆಯಿತು.

ಜಾತ್ರಾ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ಅಡವಿರಾಯನಿಗೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ, ವ್ಯಾಸಪೂಜೆ, ರಥಾಂಗ ಹೋಮ, ಪವಮಾನ ಹೋಮ, ಸತ್ಯನಾರಾಯಣ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕಾಗಿ ಆಗಮಿಸಿ ಜಾತ್ರೆಗೆ ವಿಶೇಷ ಕಳೆ ತಂದರು.ವಿಶೇಷವಾಗಿ ನೂತನ ವಧು-ವರರು ಪಾಲ್ಗೊಂಡು ದೇವರ ಆಶೀರ್ವಾದ ಪಡೆದಿದ್ದು ಗಮನ ಸೆಳೆಯಿತು. ದಾಂಪತ್ಯ ಜೀವನ ಸುಖ-ಶಾಂತಿ ಹಾಗೂ ಸಮೃದ್ಧಿಯಿಂದ ಸಾಗಲೆಂದು ನವದಂಪತಿಗಳು ದೇವರಿಗೆ ಪೂಜೆ ಸಲ್ಲಿಸಿದರು.

ರಾಮೋಹಳ್ಳಿಯ ವಿಶ್ವಭೂಷಣ ತೀರ್ಥ ಸ್ವಾಮೀಜಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಅರ್ಚಕ ಮಧ್ವಾಚಾರ ಪೂಜಾರ, ಸುಧೀಂದ್ರ ಎ.ಪೂಜಾರ, ವಾದಿರಾಜ ಪೂಜಾರ ಧಾರ್ಮಿಕ ಸಂಪ್ರದಾಯ ನೆರವೇರಿಸಿದರು.

ಹರಿವಾಣ ಸೇವೆ, ಪತ್ತಾ ಸೇವೆ ಕಾರ್ಯಕ್ರಮ ನಡೆದವು. ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಅಡವಿರಾಯ ದೇವರ ದರ್ಶನ ಪಡೆದರು. ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪುರ ಸೇರಿದಂತೆ ಅನೇಕ ಗಣ್ಯರು ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ನೆರೆದಿದ್ದರು.ವಿವಿಧ ಸಮುದಾಯಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.