ಹರಪನಹಳ್ಳಿ: ತಾಲೂಕಿನ ಹಲುವಾಗಲು ಪೊಲೀಸ್ ಠಾಣೆಗೆ ಮಂಜೂರಾಗಿದ್ದ 24 ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಲುವಾಗಲು ಪೊಲೀಸ್ ಠಾಣೆಗೆ ₹5 ಕೋಟಿ ವೆಚ್ಚದಲ್ಲಿ ಒಟ್ಟು 24 ಪೊಲೀಸ್ ವಸತಿ ಗೃಹಗಳು ಮಂಜೂರಾಗಿದ್ದು, ಪೊಲೀಸರು ಇವುಗಳನ್ನು ಸರಿಯಾಗಿ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.ಈ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ 11 ತಿಂಗಳ ಕಾಲಾವಕಾಶ ಇದ್ದು, ವರ್ಷದೊಳಗೆ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಅವರು ಸೂಚಿಸಿದರು.
ಹರಪನಹಳ್ಳಿ ಪೊಲೀಸ್ ಠಾಣೆಗೂ ಪೊಲೀಸ್ ವಸತಿ ಗೃಹಗಳ ಅವಶ್ಯಕತೆ ಇದ್ದು, ಶೀಘ್ರದಲ್ಲಿಯೇ ಹೆಚ್ಚುವರಿಯಾಗಿ ಪೊಲೀಸ್ ವಸತಿ ಗೃಹಗಳನ್ನು ಮಂಜೂರು ಮಾಡಿಸಲಾಗವುದು ಎಂದು ನುಡಿದರು.ಪೊಲೀಸ್ ಎಂದರೆ ಸಾರ್ವಜನಿಕರು ಭಯಪಡುವುದು ಬೇಡ, ಅವರ ಜೊತೆ ಪ್ರೀತಿಯಿಂದ ವರ್ತಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ವಸತಿ ಗೃಹಗಳು ಇದ್ದರೆ ನಮ್ಮ ಸಿಬ್ಬಂದಿಗೆ ಬೇಗ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಜೊತೆಗೆ ಸಾರ್ವಜಿಕರಿಗೂ ಅನುಕೂಲವಾಗುತ್ತದೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಡಿವೈಎಸ್ಪಿ ಸಂತೋಷ ಚವ್ಹಾಣ್, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್ಐ ಎ.ಕಿರಣ್ ಕುಮಾರ, ಶಂಭುಲಿಂಗ ಹರೇಮಠ್, ಮುಖಂಡರಾದ ಲಾಟಿ ದಾದಪೀರ್, ದನಕವರ ಸೋಮಲಿಂಗಪ್ಪ, ದಾದಪುರ ಶಿವಪತ್ರ, ಮತ್ತೂರು ಬಸವರಾಜ, ಕುಂಚೂರು ಇಬ್ರಾಂ, ಶೌಕತ್, ಸೇರಿದಂತೆ ಪೊಲೀಸ್ ಸಿಬ್ಬಂದಿ ಸಾರ್ವಜನಿಕರು ಇದ್ದರು.
ಹರಪನಹಳ್ಳಿಯ ಹಲುವಾಗಲು ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಾಸಕಿ ಎಂ.ಪಿ.ಲತಾ ಭೂಮಿ ಪೂಜೆ ನೆರವೇರಿಸಿದರು. ಎಸ್ಪಿ ಜಾಹ್ನವಿ ಸೇರಿದಂತೆ ಇತರರು ಇದ್ದರು.