ರೈತರಿಗೆ ರಸಗೊಬ್ಬರ ನೀಡುವಂತೆರಾಜ್ಯಕ್ಕೆ ಸೂಚಿಸಿ: ಡಾ। ಸುಧಾಕರ್

| Published : Jul 31 2025, 12:46 AM IST

ರೈತರಿಗೆ ರಸಗೊಬ್ಬರ ನೀಡುವಂತೆರಾಜ್ಯಕ್ಕೆ ಸೂಚಿಸಿ: ಡಾ। ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಸುತ್ತಿಲ್ಲ. ಆದ್ದರಿಂದ ಕಾಳಸಂತೆಯಲ್ಲಿರುವ ಹಾಗೂ ದಾಸ್ತಾನಿರುವ ರಸಗೊಬ್ಬರವನ್ನು ರೈತರಿಗೆ ತಲುಪುವಂತೆ ಮಾಡಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಬೇಕು ಎಂದು ಸಂಸತ್ ಅಧಿವೇಶನದಲ್ಲಿ ಸಂಸದ ಡಾ। ಕೆ.ಸುಧಾಕರ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರ್ನಾಟಕದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಸುತ್ತಿಲ್ಲ. ಆದ್ದರಿಂದ ಕಾಳಸಂತೆಯಲ್ಲಿರುವ ಹಾಗೂ ದಾಸ್ತಾನಿರುವ ರಸಗೊಬ್ಬರವನ್ನು ರೈತರಿಗೆ ತಲುಪುವಂತೆ ಮಾಡಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಬೇಕು ಎಂದು ಸಂಸತ್ ಅಧಿವೇಶನದಲ್ಲಿ ಸಂಸದ ಡಾ। ಕೆ.ಸುಧಾಕರ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಬುಧವಾರ ಶೂನ್ಯ ವೇಳೆಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಅವರು, ಮುಂಗಾರು ಖಾರಿಫ್‌ ಋತುಮಾನವು ಕೃಷಿಗೆ ನಿರ್ಣಾಯಕ ಅವಧಿಯಾಗಿದ್ದು, ರೈತರು ಭತ್ತ, ಜೋಳ, ರಾಗಿ, ನೆಲಗಡಲೆ, ಸೋಯಾಬೀನ್‌, ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ದುರದೃಷ್ಟವಶಾತ್‌ ಜಾಗತಿಕ ಮಟ್ಟದಲ್ಲಿ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 8.13 ಲಕ್ಷ ಟನ್‌ ಯೂರಿಯಾವನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದೆ. ಆದರೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅಸಮರ್ಪಕ ಆಡಳಿತದಿಂದಾಗಿ ದಾಸ್ತಾನಿರುವ ರಸಗೊಬ್ಬರವನ್ನು ಸರಿಯಾಗಿ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಈ ಮೂಲಕ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.ಕರ್ನಾಟಕದಲ್ಲಿ ₹258 ಕ್ಕೆ ಸಬ್ಸಿಡಿ ದರದಲ್ಲಿ ಯೂರಿಯಾ ಸಿಗಬೇಕಿದ್ದರೂ, ಕಾಳಸಂತೆಯಲ್ಲಿ ₹500 ಕ್ಕೆ ದೊರೆಯುತ್ತಿದೆ. ಡಿಎಪಿ ₹1200 ಸಿಗಬೇಕಿದ್ದರೂ ₹2,000 ಕ್ಕೆ ಮಾರಾಟವಾಗುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ನೇತೃತ್ವದಲ್ಲಿ ಎಲ್ಲ ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ನಿಯೋಗದೊಂದಿಗೆ ರಸಗೊಬ್ಬರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಸಮಸ್ಯೆಯ ಬಗ್ಗೆ ಚರ್ಚಿಸಿದ್ದೇವೆ. ಆದ್ದರಿಂದ, ಈಗಾಗಲೇ ಕಾಳಸಂತೆಯಲ್ಲಿರುವ ರಸಗೊಬ್ಬರ ಸರಿಯಾದ ದರದಲ್ಲಿ ಸಮರ್ಪಕವಾಗಿ ರೈತರನ್ನು ತಲುಪುವಂತೆ ಮಾಡಬೇಕಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರದಿಂದ ಮಾಹಿತಿ ಹಾಗೂ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.