ಕನ್ನಡಪ್ರಭ ವಾರ್ತೆ ಪಾಂಡವಪುರ

ಉಪವಿಭಾಗಾಧಿಕಾರಿ ಶ್ರೀನಿವಾಸ್, ಕೆ.ಆರ್.ಪೇಟೆ ತಾಲೂಕು ತಹಸೀಲ್ದಾರ್ ಉಮ ಮಹದೇಶ್ವರಪ್ಪ ಅವರು ಪಿಟಿಸಿಎಲ್ ಕಾಯ್ದೆಯನ್ನು ವಜಾಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ದಸಂಸ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಧರಣಿ ನಡೆಸಿದ ದಸಂಸ ಮುಖಂಡರು ಎಸಿ ಶ್ರೀನಿವಾಸ್, ಕೆ.ಆರ್.ಪೇಟೆ ತಹಸೀಲ್ದಾರ್ ಉಮ ಮಹದೇಶ್ವರಪ್ಪ, ಆರ್‌ಐ ಚಂದ್ರಕಲಾ, ಕೇಸ್‌ ವರ್ಕರ್ ಪುನೀತ್ ವಿರುದ್ಧ ಘೋಷಣೆ ಕೂಗಿ ಇವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರವು ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವೊಂದು ಭೂಮಿಗಳೇ ವರ್ಗಾವಣೆಯ ನಿಷೇಧ) ಅಧಿನಿಯಮ 1978 ಪಿಟಿಸಿಎಲ್ ಕಾಯ್ದೆ ಜಾರಿಯಲ್ಲಿದೆ. ಇದರ ಬಗ್ಗೆ ಅರಿವಿದ್ದರೂ ಉಪವಿಭಾಗಾಧಿಕಾರಿ, ಕೆ.ಆರ್.ಪೇಟೆ ತಹಸೀಲ್ದಾರ್ ಅವರು ಹಲವು ಪಿಟಿಸಿಎಲ್ ಕಾಯ್ದೆಯನ್ನು ವಜಾಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಸಿ ಶ್ರೀನಿವಾಸ್ ಅವರನ್ನು ಪ್ರತಿಭಟನಾಕಾರರು ಪ್ರಶ್ನಿಸಿ ಈ ಹಿಂದಿನ ಉಪವಿಭಾಗಾಧಿಕಾರಿಗಳು ನೀಡಿರುವ ಆದೇಶವನ್ನು ನೀವು, ತಹಸೀಲ್ದಾರ್ ಅವರು ಉಲ್ಲಂಘನೆ ಮಾಡಿದ್ದೀರಾ, ಕಾನೂನಿ ಪ್ರಕಾರ ಕೆಲಸ ಮಾಡಬೇಕು. ಪಿಟಿಸಿಎಲ್ ಕಾಯ್ದೆ ವಜಾಮಾಡುವ ಹಕ್ಕು ನಿಮಗಿಲ್ಲ. ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.


ಇದಕ್ಕೆ ಪ್ರತಿಕ್ರಿಯಿಸಿದ ಎಸಿ ಈ ಪ್ರಕರಣದ ಬಗ್ಗೆ ನಾನು ಹೆಚ್ಚಿನ ದಾಖಲಾತಿ ಪರಿಶೀಲನೆ ನಡೆಸಿ 15 ದಿನದೊಳಗೆ ತಹಸೀಲ್ದಾರ್ ಅವರ ನೀಡಿರುವ ವರದಿ ರದ್ದುಗೊಳಿಸಿ ಆದೇಶಿಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ದೇವರಾಜು, ತಾಲೂಕು ಸಂಚಾಲಕ ವಿಜಯ್‌ಕುಮಾರ್ ಬಿ.ಕೆ., ರಾಮಯ್ಯ ಉರಗಲವಾಡಿ, ಹಾರೋಹಳ್ಳಿ ಸೋಮು, ಯೋಗೇಶ್, ಬ್ಯಾಡರಹಳ್ಳಿ ಪ್ರಕಾಶ್, ಹಾಳಪ್ಪ, ಶಿವರಾಜು, ಕುಮಾರ್, ಲಿಂಗರಾಜು, ಚಂದ್ರಶೇಖರ್, ಟಿ.ಕೆ.ಮುದ್ದಯ್ಯ, ದೊಡ್ಡವೆಂಕಟಯ್ಯ, ನರಸಿಂಹಮೂರ್ತಿ, ದೇವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.