ಕನ್ನಡಪ್ರಭ ವಾರ್ತೆ ಹಲಗೂರು
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಟ ಮಾಡಿದ ಮಹಾನ್ ನಾಯಕರು ಎಂದು ಮೈಸೂರಿನ ಕೀಲು ಮೂಳೆ ತಜ್ಞ ಡಾ.ಜಗನ್ನಾಥ್ ಹೇಳಿದರು.ಸಮೀಪದ ತೊರೆಕಾಡನಹಳ್ಳಿಯ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಲೋನಿಯ ರಂಗ ಮಂದಿರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ಥಳೀಯ ಸಮಿತಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕೇಂದ್ರ ಸಂಘ ಹಾಗೂ ಬೆಂಗಳೂರು ಜಲ ಮಂಡಳಿ ನೌಕರರ ಕೇಂದ್ರ ಸಂಘ, ಸ್ಥಳೀಯ ನೌಕರರ ಸಂಘ ಆಶಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿದ್ದರು. ಹಲವು ಪದವಿಗಳನ್ನು ಪಡೆದರು. ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾದರು. ದೇಶಕ್ಕೆ ಉತ್ತಮ ಸಂವಿಧಾನ ರಚಿಸಿ ಸಂವಿಧಾನ ಶಿಲ್ಪಿಯಾದರು ಎಂದರು.
ಬೆಂಗಳೂರು ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಎ.ಗೋವಿಂದರಾಜ್ ಮಾತನಾಡಿ, ಅಂಬೇಡ್ಕರ್ ಅವರ ಮಾರ್ಗದರ್ಶನದಂತೆ ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಟ ಮಾಡಬೇಕು. ಇಂದಿನ ನಮ್ಮ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹೊರ ದೇಶಕ್ಕೆ ಹೋದರೆ ಅಲ್ಲಿಯೇ ನೆಲೆಸಿ ಜೀವನ ಕಟ್ಟಿಕೊಳ್ಳುತ್ತಾರೆ. ಆದರೆ, ಅಂಬೇಡ್ಕರ್ ರವರು ವಿದೇಶದಲ್ಲಿ ಅಷ್ಟು ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಬಂದು ನಮ್ಮೆಲ್ಲರ ಜೀವನ ಬೆಳಗುವ ಆಶಾದೀಪವಾದರು ಎಂದು ಶ್ಲಾಘಿಸಿದರು.ಕಾವೇರಿ ಮುಖ್ಯ ಕೆಲಸಗಳ ಮುಖ್ಯ ಅಭಿಯಂತರ ಎ.ರಾಜಶೇಖರ್ ಮಾತನಾಡಿ, ತುಳಿತಕ್ಕೊಳಗಾದವರು ಸಮಾಜದಲ್ಲಿ ಅಸಮಾನತೆ, ದೌರ್ಜನ್ಯಗಳು ಹೆಚ್ಚಾದಾಗ ಸಮಾಜದ ಸುಧಾರಣೆಗಾಗಿ ಯುಗ ಪುರುಷರು ಅವತರಣಿಸುತ್ತಾರೆ. ಅವರೇ ಅಂಬೇಡ್ಕರ್. ಈ ಮಹಾನ್ ಚೇತನವನ್ನು ಸದಾ ಸ್ಮರಿಸಬೇಕು. ಸಂವಿಧಾನ ಅರ್ಥೈಸಿಕೊಂಡು ಅದರ ರಕ್ಷಣೆ, ಆಶಯಗಳಿಗೆ ಬದ್ಧರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ನೌಕರರಿಗೆ ವಿವಿಧ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ಮುಖ್ಯ ಅಭಿಯಂತರ ಎ.ರಾಜಶೇಖರ್ ಮಾತನಾಡಿದರು. ಸಹಾಯಕ ಅಭಿಯಂತರರಾದ ಪ್ರೀತಂ ಡಿ.ಎಸ್, ಶಿವಕುಮಾರ್ ಚಲವಾದಿ, ವಸೀಮ್ ಉಲ್ಲಾ ಖಾನ್, ತನುಶ್ರೀ ಎಂ.ಕೆ, ಚೇತನ್ ಜಿ.ಆರ್. ಸಣ್ಣ ಲಕ್ಷ್ಮಣ, ಎಂ ಎಸ್. ಸುನೀಲ್ ಕುಮಾರ್, ಬಸವರಾಜ್ ಸಜ್ಜನ್, ಎಂ.ಎಸ್.ಚೇತನ್, ಅಭಿಯಂತರರಾದ ಬಿ.ಕೆ.ನರೇಶ್, ಮಹಮ್ಮದ್ ಹನೀಫ್ ಯತ್ನಟ್ಟಿ, ಎನ್. ರಘು, ಕೆ.ಎಸ್.ಕಾರ್ತಿಕ್, ಅನಿಲ್ ಕುಮಾರ್, ಮಧು, ನಾಗರಾಜು, ಜಿ.ಆರ್.ಪಲ್ಲವಿ, ಎನ್.ರಮೇಶ್ ಇದ್ದರು.