ರೋಣ: ಪ್ರತಿ ಗ್ರಾಮಕ್ಕೂ ಜನ, ಜಾನುವಾರುಗಳಿಗೆ ಸಮರ್ಪಕ ನೀರು ಪೂರೈಸುವಲ್ಲಿ ತೊಂದರೆಯಾಗದಂತೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು. ಎಲ್ಲಾದರೂ ನೀರಿನ ತೊಂದರೆಯಾದಲ್ಲಿ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ತಾಕೀತು ಮಾಡಿದರು.
ಭಾನುವಾರ ಪಟ್ಟಣ ತಾಪಂ ಸಭಾಭವನದಲ್ಲಿ ಕುಡಿಯುವ ನೀರು ಪೂರೈಕೆ ಮುಂಜಾಗೃತಾ ಕ್ರಮ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು, ತಾಪಂ ಗ್ರಾಪಂ, ಡಿಬಿಒಟಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ದಿನೆ ದಿನೇ ಬಿಸೀಲಿನ ತಾಪಮಾನ ಭಯಾನಕ ರೀತಿಯಲ್ಲಿ ಏರುತ್ತಿದೆ. ಈಗಾಗಲೇ 40 ಡಿಗ್ರಿಗೂ ಹೆಚ್ಚಳವಾಗಿದೆ. ಈ ಹಿನ್ನೆಲೆ ಜನರ ಆರೋಗ್ಯ ರಕ್ಷಣೆ, ಸಮರ್ಪಕ ನೀರು ಪೂರೈಕೆ ಅತಿ ಮುಖ್ಯವಾಗಿದೆ. ಈಗಾಗಲೇ ಜಿಲ್ಲಾದ್ಯಂತ ತುಂಗಭದ್ರಾ ಮತ್ತು ಮಲಪ್ರಭಾ ನದಿಯಿಂದ 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ₹1049 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ.
ಈ ಯೋಜನೆ ಮೂಲಕ ದಿನದ 24 ತಾಸು ಪ್ರತಿ ವ್ಯಕ್ತಿಗೆ 75 ಲೀಟರ್, ಜಾನುವಾರುಗಳಿಗೆ 150 ಲೀಟರ್ ಪೂರೈಕೆ ಮಾಡಬೇಕಿದೆ. ಇದಕ್ಕಾಗಿ ಪ್ರತಿವರ್ಷ ಜಿಲ್ಲೆಗೆ ₹ 7 ಕೋಟಿ ಹಣವನ್ನು ಡಿಬಿಒಟಿ ನಿರ್ವಹಣೆ ಮಾಡುವ ಕಂಪನಿಗಳಿಗೆ ಸರ್ಕಾರ ಸಂದಾಯ ಮಾಡುತ್ತಿದೆ. ಆದರೆ ಅನೇಕ ಗ್ರಾಮಗಳಲ್ಲಿ ಡಿಬಿಒಟಿ ಮೂಲಕ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂದರು.ಬಾಸಲಾಪುರ, ಮುಗಳಿ, ಸವಡಿ, ಅಬ್ಬಿಗೇರಿ, ಸರ್ಜಾಪುರ, ಶಾಂತಗೇರಿ, ಹಿರೇಗಾಳ, ನೈನಾಪುರ, ಬಸರಕೋಡ, ಚಿಕ್ಕಮಣ್ಣೂರ, ಹಿರೇಮಣ್ಣೂರ ಗೋಗೇರಿ, ಅಮರಗಟ್ಟಿ, ಗುಳಗುಳಿ, ಮಾಟರಂಗಿ, ಕೋಟುಮಚಗಿ, ಹಳ್ಳಿಕೇರಿ, ಯರೇಕುರಬನಾಳ, ನೆಲ್ಲೂರ, ಪ್ಯಾಟಿ, ಹಾಳಕೇರಿ, ರಾಂಪೂರ ಸೇರಿದಂತೆ ಅನೇಕ ಗ್ರಾಮಗಳಿಗೆ ಡಿಬಿಒಟಿ ಮೂಲಕ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಕೂಡಲೇ ಡಿಬಿಒಟಿ ನಿರ್ವಹಣೆ ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್, ಅಭಿಯಂತರು ಕಾರ್ಯೋನ್ಮುಕರಾಗಿ, ನಿಗದಿತ ಪ್ರಮಾಣದಲ್ಲಿ ನೀರು ಸರಬರಾಜು ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು. ನಿಮಗೆ ಏನಾದರೂ ತೊಂದರೆ, ತಾಂತ್ರಿಕ ಸಮಸ್ಯೆ ಎದುರಾದಲ್ಲಿ ನನ್ನ ಗಮನಕ್ಕೆ ತರಬೇಕು. ಕಾಟಾಚಾರಕ್ಕೆ ನೀರು ಕೊಟ್ಟರೆ ನಡೆಯುವುದಿಲ್ಲ. ಅಲ್ಲಿನ ಜನ ಮತ್ತು ಜಾನುವಾರುಗಳ ಸಂಖ್ಯೆಗೆ ಅಗತ್ಯಕ್ಕೆ ಅನುಗುಣವಾಗಿ ನೀರು ಪೂರೈಸಬೇಕು ಎಂದು ಡಿಬಿಒಟಿ ಅಭಿಯಂತರರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಬಹುತೇಕ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ನಮ್ಮ ಗ್ರಾಮಗಳಿಗೆ ಡಿಬಿಒಟಿ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ, ಇದರಿಂದ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಶಾಸಕರ ಬಳಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪಾಟೀಲ, ನೀರಿನ ಸಮಸ್ಯೆಯಾಗದಂತೆ ಡಿಬಿಇಟಿ ಅಧಿಕಾರಿಗಳು ನೋಡಿಕೊಳ್ಳಬೇಕು. ನೀರು ಸರಬರಾಜು ಮಾಡುವಲ್ಲಿ ಎದುರಾಗುವ ತೊಂದರೆಗಳನ್ನು ತಾಒಂ ಇಒ, ತಹಸೀಲ್ದಾರ್, ಪಿಡಿಒಗಳೊಂದಿಗೆ ನಿರಂತರ ಸಂಪರ್ಕಕದಲಿದ್ದು ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ನೀರಿನ ಸಮಸ್ಯೆಯಾಗದಂತೆ ರೋಣ, ಗದಗ, ಗಜೇಂದ್ರಗಡ, ಮುಂಡರಗಿ ತಹಸೀಲ್ದಾರ್ ಈ ಕುರಿತು ವಾರಕ್ಕೊಮ್ಮೆ, 15 ದಿನಕ್ಕೊಮ್ಮೆ ಸಭೆ ನಡೆಸಿ ಚರ್ಚಿಸಿ, ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ್ ನಾಗರಾಜ ಕೆ., ತಾಒಂ ಇಒ ಚಂದ್ರಶೇಖರ ಕಂದಕೂರ ಮತ್ತು ಗಜೇಂದ್ರಗಡ, ಗದಗ, ಮುಂಡರಗಿ ತಹಸೀಲ್ದಾರ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.