ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುಮಲೆನಾಡು ಭಾಗವಾದ ಅರೇಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮುಂಗಾರುಮಳೆ ಚುರುಕುಗೊಂಡಿದ್ದು ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಸರ್ಕಾರಿ ಶಾಲೆಯ ಕಾಂಪೌಂಡ್ ಕುಸಿದುಬಿದ್ದಿದೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಮಿತಿಯ ಸುತ್ತಲೂ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕಾಂಪೌಂಡ್ನ ಒಂದು ಬದಿಯ ಉದ್ದಗಲಕ್ಕೂ ಧಾರಾಕಾರ ಮಳೆಗೆ ಕುಸಿದು ಬಿದ್ದಿದೆ. ಇದರಿಂದ ಪಕ್ಕದಲ್ಲೇ ನೂತನವಾಗಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರದ ಸಿಮೆಂಟ್ ಇಂಟರ್ಲಾಕ್ಗಳು ಸಹ ಸಾಕಷ್ಟು ಹಾನಿಯಾಗಿದೆ. ಗಾಳಿ, ಮಳೆ, ಬಿರುಗಾಳಿಯಿಂದ ಗೋಡೆಯ ಸಾಮರ್ಥ್ಯ ಕಡಿಮೆಯಾಗಿದ್ದಲ್ಲದೆ ಕೆಲವೊಮ್ಮೆ ಕಾಂಪೌಂಡ್ ಗೋಡೆಗಳನ್ನು ನಿರ್ಮಿಸುವಾಗ ಸರಿಯಾದ ಗುಣಮಟ್ಟದ ವಸ್ತುಗಳನ್ನು ಬಳಸದೆ ಇರುವುದು ಅಥವಾ ಸೂಕ್ತ ಎಂಜಿನಿಯರಿಂಗ್ ಮಾನದಂಡಗಳನ್ನು ಪಾಲಿಸದಿರುವುದೇ ಇದಕ್ಕೆ ಕಾರಣವಾಗಿರಬಹುದು. ಮಣ್ಣು ಸಡಿಲವಾಗಿದ್ದಾಗ ಅಥವಾ ಅಡಿಪಾಯವನ್ನು ಸರಿಯಾಗಿ ವಿನ್ಯಾಸಗೊಳಿಸಲಿದ್ದಾಗ ಭಾರಿ ಮಳೆಯಿಂದಾಗಿ ದೊಡ್ಡ ಕುಸಿತಕ್ಕೆ ಕಾರಣವಾಗಿದೆ.ಈ ಕುಸಿತದ ಬಗ್ಗೆ ರೈತ ಸಂಪರ್ಕ ಕೇಂದ್ರದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಆಡಳಿತ ಮಂಡಳಿಯವರು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಅರೇಹಳ್ಳಿ ಸರ್ಕಾರಿ ಶಾಲೆಯ ಕಾಂಪೌಂಡ್ ಕುಸಿದ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಇದು ಕೃಷಿ ಇಲಾಖೆ ರೈತ ಸಂಪರ್ಕಕ್ಕೆ ಸೇರಿದ್ದಾಗಿದ್ದು ಇದನ್ನು ಅವರಿಗೆ ತಿಳಿಸಿ ಮೇಲ್ಭಾಗದಲ್ಲಿ ಪೈಪ್ನೀರು ಕಾಂಪೌಂಡ್ಗೆ ಬೀಳುತ್ತಿದ್ದರಿಂದ ಈ ರೀತಿ ಆಗಿರಬಹುದು. ಅಲ್ಲದೆ ಅದನ್ನು ಬೇರೆಡೆಗೆ ತಿರುಗಿಸಲು ಹೇಳಿದ್ದು ಹಾಗೂ ಕಾಂಪೌಂಡ್ ಅನ್ನು ಹೊಸದಾಗಿ ಮಾಡಿಸಿಕೊಡಿ ಮತ್ತೆ ಇನ್ನು ಮುಂದೆ ಹೀಗಾಗದಂತೆ ಜಾಗೃತಿ ವಹಿಸಬೇಕೆಂದು ಎಚ್ಚರಿಕೆ ನೀಡಿದರು.