ಕೃತಕ ಬುದ್ಧಿಮತ್ತೆ ಮಾನವನನ್ನು ಮೀರಿಸಲು ಸಾಧ್ಯವಿಲ್ಲ

| Published : Feb 18 2025, 12:33 AM IST

ಸಾರಾಂಶ

ಕಲಬುರಗಿ: ಪ್ರಪಂಚದಾದ್ಯಂತ ಚರ್ಚೆಯಲ್ಲಿರುವ ಕೃತಕ ಬುದ್ಧಿಮತ್ತೆ ಮಾನವನನ್ನು ಮೀರಿಸಲು ಸಾಧ್ಯವಿಲ್ಲ. ಏಕೆಂದರೆ ಅದೂ ಸಹ ಮಾನವನ ಸೃಷ್ಟಿಯೇ ಆಗಿದೆ, ಹೀಗಾಗಿ ಕೃತಕ ಬುದ್ಧಿಮತ್ತೆ ಎಂದಿಗೂ ಮಾನವನನ್ನು ಮೀರಿಸಲು ಸಾಧ್ಯವಿಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಧರ್ಮಸಿಂಗ್‌ ಪ್ರತಿಪಾದಿಸಿದರು.

ಕಲಬುರಗಿ: ಪ್ರಪಂಚದಾದ್ಯಂತ ಚರ್ಚೆಯಲ್ಲಿರುವ ಕೃತಕ ಬುದ್ಧಿಮತ್ತೆ ಮಾನವನನ್ನು ಮೀರಿಸಲು ಸಾಧ್ಯವಿಲ್ಲ. ಏಕೆಂದರೆ ಅದೂ ಸಹ ಮಾನವನ ಸೃಷ್ಟಿಯೇ ಆಗಿದೆ, ಹೀಗಾಗಿ ಕೃತಕ ಬುದ್ಧಿಮತ್ತೆ ಎಂದಿಗೂ ಮಾನವನನ್ನು ಮೀರಿಸಲು ಸಾಧ್ಯವಿಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಧರ್ಮಸಿಂಗ್‌ ಪ್ರತಿಪಾದಿಸಿದರು.ಸೋಮವಾರ ಇಲ್ಲಿನ ಶರಣಬಸವ ವಿವಿ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ “ಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬ-2025” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಈ ಮೂರು ಕ್ಷೇತ್ರ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದಲ್ಲಿ ಮಾಧ್ಯಮ ಅಂಗ ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಇಂತಹ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಓದುವ ಅಧ್ಯಯನಶೀಲರಾಗಬೇಕು, ಪುಸ್ತಕದಿಂದ ಜ್ಞಾನಾರ್ಜನೆ ಪಡೆದಾಗ ಮಾತ್ರ ಪರಿಪೂರ್ಣರಾಗುತ್ತೀರಿ ಮತ್ತು ನಿಮ್ಮಲ್ಲಿ ಪ್ರಶ್ನೆ ಕೇಳುವ ಧೈರ್ಯ ಬರುತ್ತೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಪ್ರದೇಶದ ಅಭಿವೃದ್ಧಿಗೆ ಮಾಧ್ಯಮದ ಕೊಡುಗೆ ಅನನ್ಯವಾಗಿದೆ. ಮಾಧ್ಯಮ ಸಮಾಜದ ಪ್ರತಿಬಿಂಬವಾಗಿದ್ದು, ಯುವ ಉದಯೋನ್ಮುಖ ಪತ್ರಕರ್ತರಿಗೆ ವೇದಿಕೆ ಒದಗಿಸುವ ಮೀಡಿಯಾ ಫೆಸ್ಟ್ ತಮ್ಮ ಸಂಸ್ಥಾನದ ಆವರಣದಲ್ಲಿ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಆಶಯ ಭಾಷಣ ಮಾಡುತ್ತಾ, ಅಕಾಡೆಮಿಯಿಂದ ಎಸ್.ಸಿ.ಪಿ-ಟಿ.ಎಸ್.ಪಿ ಹಾಗೂ ಲಿಂಗಾನುಪಾತ ಅನುದಾನದಡಿ ಮಹಿಳಾ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದ್ದು, ಈ ಭಾಗದ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದ ಅವರು, ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಬೇಡ, ಪ್ರಶ್ನೆ ಕೇಳಲು ಧೈರ್ಯ ತೋರಬೇಕು. ಪ್ರದೇಶದ ವಿದ್ಯಾರ್ಥಿಗಳು ಸಂಕುಚಿತ ಮನೋಭಾವನೆಯಿಂದ ಹೊರಬನ್ನಿ ಎಂದು ಹೇಳಿದರು.ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಸಮಾಜದ ಕನ್ನಡಿಯೇ ಮಾಧ್ಯಮ. ಹೀಗಾಗಿ ಈ ರಂಗದಲ್ಲಿನ ಸಂವೇದನಶೀಲತೆ ಹೆಚ್ಚಲು ಮಹಿಳೆಯರು ಮಾಧ್ಯಮದತ್ತ ಹೆಚ್ಚಿಗೆ ಮುಖಮಾಡಲಿ ಎಂದ ಅವರು, ಸಾಮಾಜಿಕ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಪತ್ರಕರ್ತನಾದವನಿಗೆ ಮಾನವ ಸ್ಪರ್ಶಿ ಇರಬೇಕಾದದ್ದು, ಅತೀ ಅವಶ್ಯಕ ಎಂದರು.ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿ ಬಿ.ಕೆ.ರವಿ ಮಾತನಾಡಿ, ಇತ್ತೀಚೆಗೆ ಮಾಧ್ಯಮಗಳು ಮನೋರಂಜನೆ ಸುದ್ದಿಗೆ ಹೆಚ್ಚು ಮಹತ್ವ ನೀಡುತ್ತಿರುವುದರಿಂದ ಅಭಿವೃದ್ಧಿ ಪರ, ಸಮಾಜ ಮುಖಿಯ ಸುದ್ದಿಗಳು ದೂರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇಂದಿಗೂ ನಮ್ಮ ರಾಜ್ಯದಲ್ಲಿ ಅಪೌಷ್ಟಿಕತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಿದೆ. ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳು ಕಾಡುತ್ತಿವೆ. ಇದನ್ನೆಲ್ಲ ನಿರ್ಮೂಲನೆ ಮಾಡಬೇಕಿರುವುದರಿಂದ ಮನೋರಂಜನೆ ಜೊತೆಗೆ ಸಮಾಜಮುಖಿ ಸುದ್ದಿಗಳಿಗೂ ಮಾಧ್ಯಮಗಳು ಹೆಚ್ಚು ಆದ್ಯತೆ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಅನಿಲಕುಮಾರ ಬಿಡವೆ, ಕುಲಸಚಿವ ಡಾ.ಎಸ್.ಜಿ.ಡೊಳ್ಳೆಗೌಡರ್, ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ, ಸಿದ್ದೇಶ್ವರಪ್ಪ.ಜಿ.ಬಿ, ಉಪನಿರ್ದೇಶಕರಾದ ರಾಮಲಿಂಗಪ್ಪ.ಬಿ.ಕೆ, ಜಡಿಯಪ್ಪ ಗೆದ್ಲಗಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್, ಕಲಬುರಗಿ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ವಿ.ಡಿ.ಮೇತ್ರೆ, ಅಲ್ಲಮಪ್ರಭು ದೇಶಮುಖ, ಸಂಜಯಗೌಡ ಹೊಸಮನಿ ಮತ್ತಿತರರಿದ್ದರು.

ಎರಡು ದಿನಗಳ ಕಾಲ ಶರಣಬಸವ ವಿವಿಯಲ್ಲಿ ನಡೆಯುವ ಮೀಡಿಯಾ ಫೆಸ್ಟ್‌ನಲ್ಲಿ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.