ಕೃತಕ ಬುದ್ಧಿಮತ್ತೆ ಆವಿಷ್ಕಾರ ಸದ್ಬಳಕೆ ಮುಖ್ಯ: ಸಿ.ವಿ.ಗೌಡರ್

| Published : Jun 22 2024, 12:48 AM IST

ಸಾರಾಂಶ

ಕೃತಕ ಬುದ್ಧಿಮತ್ತೆ ಆವಿಷ್ಕಾರ ಈಗಿನ್ನೂ ಆರಂಭಿಕ ಹಂತದಲ್ಲಿದ್ದು, ಮುಂದೆ ವ್ಯಾಪಕವಾದಲ್ಲಿ ತಂತ್ರಾಂಶ ಅಭಿವೃದ್ಧಿ ಅಂದರೆ ಸಾಫ್ಟ್ ವೇರ್ ಡೆವಲೆಪ್ಮೆಂಟ್ ಸಹಾ ಒಂದು ಕೌಶಲ್ಯವಾಗಿರದೇ ಸಾಮಾನ್ಯ ಎನ್ನಿಸಬಹುದು. ಆದ್ದರಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಇರುವವರು ಕೃತಕ ಬುದ್ಧಿಮತ್ತೆಯ ಚಿಕ್ಕಚಿಕ್ಕ ಕೋರ್ಸ್‌ಗಳನ್ನು ಈಗಿನಿಂದಲೇ ಪಡೆಯುವುದು ಕ್ಷೇಮಕರ ಎಂದು ಬೆಂಗಳೂರಿನ ಎಂಪ್ಲೇ ಇನ್ಕಾರ್ಪೊರೇಷನ್ ಮುಖ್ಯ ವಿಶ್ಲೇಷಣಾಧಿಕಾರಿ ಸಿ.ವಿ.ಗೌಡರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ರಾಜ್ಯಮಟ್ಟದ ಅಂತರ ಕಾಲೇಜು ಯುವೋತ್ಸವ ''''''''ಆಕ್ಟಾಗನ್ 2024'''''''' ಉದ್ಘಾಟನೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಕೃತಕ ಬುದ್ಧಿಮತ್ತೆ ಆವಿಷ್ಕಾರ ಈಗಿನ್ನೂ ಆರಂಭಿಕ ಹಂತದಲ್ಲಿದ್ದು, ಮುಂದೆ ವ್ಯಾಪಕವಾದಲ್ಲಿ ತಂತ್ರಾಂಶ ಅಭಿವೃದ್ಧಿ ಅಂದರೆ ಸಾಫ್ಟ್ ವೇರ್ ಡೆವಲೆಪ್ಮೆಂಟ್ ಸಹಾ ಒಂದು ಕೌಶಲ್ಯವಾಗಿರದೇ ಸಾಮಾನ್ಯ ಎನ್ನಿಸಬಹುದು. ಆದ್ದರಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಇರುವವರು ಕೃತಕ ಬುದ್ಧಿಮತ್ತೆಯ ಚಿಕ್ಕಚಿಕ್ಕ ಕೋರ್ಸ್‌ಗಳನ್ನು ಈಗಿನಿಂದಲೇ ಪಡೆಯುವುದು ಕ್ಷೇಮಕರ ಎಂದು ಬೆಂಗಳೂರಿನ ಎಂಪ್ಲೇ ಇನ್ಕಾರ್ಪೊರೇಷನ್ ಮುಖ್ಯ ವಿಶ್ಲೇಷಣಾಧಿಕಾರಿ ಸಿ.ವಿ.ಗೌಡರ್ ಹೇಳಿದರು.

ಬುಧವಾರ ನಗರದ ಬಾಪೂಜಿ ಎಂಬಿಎ ಕಾಲೇಜಿನ ರಾಜ್ಯಮಟ್ಟದ ಅಂತರ ಕಾಲೇಜು ಯುವೋತ್ಸವ ''''''''ಆಕ್ಟಾಗನ್ 2024'''''''' ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯು ಮಾನವರಂತೆಯೇ ಕಾರ್ಯನಿರ್ವಹಿಸುತ್ತದೆಯಾದರೂ ಅತ್ಯಂತ ಚುರುಕಾಗಿ ಹಾಗೂ ನಿಖರವಾಗಿ ನಿರ್ವಹಿಸುತ್ತದೆ. ಕೃತಕ ಬುದ್ಧಿಮತ್ತೆಯು ದೊಡ್ಡ ಶಕ್ತಿಯಾಗಬಹುದಾದರೂ ಅದರ ಸದುಪಯೋಗ ಮುಖ್ಯ ಎಂದರು.

ಚಾಲಕನಿಲ್ಲದ ಸ್ವಯಂಚಾಲಿತ ಕಾರುಗಳು, ವೈದ್ಯರಿಲ್ಲದೇ ವೈದ್ಯಕೀಯ ತಪಾಸಣೆ, ತತ್‌ಕ್ಷಣದ ಭಾಷಾಂತರ ವ್ಯವಸ್ಥೆ, ಯಂತ್ರಗಳೇ ನಿರ್ವಹಿಸುವ ಷೇರು ವ್ಯವಹಾರ ಮುಂತಾಗಿ ಏನೆಲ್ಲವೂ ಕೌತುಕಮಯವಾಗಬಹುದು. ಆದರೂ ಗಾಬರಿಬೇಡ. ಆಸಕ್ತಿಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆ ಬಗ್ಗೆ ಈಗಿಂದಲೇ ಆಲೋಚನೆ ಮತ್ತು ಸಂಶೋಧನೆಗಳನ್ನು ವೈಯಕ್ತಿಕವಾಗಿ ಕೈಗೊಳ್ಳುವುದು ಕ್ಷೇಮಕರ ಎಂದರು.

ಕಾಲೇಜಿನ ನಿರ್ದೇಶಕ ಡಾ.ಎಚ್.ವಿ.ಸ್ವಾಮಿ ತ್ರಿಭುವಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ಆಕ್ಟಾಗನ್ ಅಂದರೆ ಅಷ್ಟಕೋನ ಎಂಬ ಈ ಉತ್ಸವದಲ್ಲಿ ಜೀವನಾವಶ್ಯಕ ಎಂಟು ಸಾಂಬಾರು ಪದಾರ್ಥಗಳ ಹೆಸರುಗಳನ್ನು ಎಂಟು ಸ್ಪರ್ಧೆಗಳಿಗೆ ಇಟ್ಟಿದ್ದು ರಾಜ್ಯದ 23ಕ್ಕೂ ಹೆಚ್ಚು ಕಾಲೇಜುಗಳಿಂದ ಸ್ಪರ್ಧಾರ್ಥಿಗಳು ಬಂದಿದ್ದಾರೆ ಎಂದರು. ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ.ಅಥಣಿ ಎಸ್.ವೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೃತಕ ಬುದ್ಧಿಮತ್ತೆಯು ಭವಿಷ್ಯದಲ್ಲಿ ಉದ್ಯೋಗಗಳನ್ನು ಕಸಿಯುತ್ತದೆ ಎಂಬ ಆತಂಕ ಬೇಡ. ಇದು ಹೊಸಹೊಸ ಉದ್ಯೋಗಗಳನ್ನು ಸೃಷ್ಟಿಸಿಕೊಡುವ ಸಾಧ್ಯತೆಗಳಿವೆ. ಆದ್ದರಿಂದಲೇ ತಮ್ಮ ಸಂಸ್ಥೆಯಲ್ಲಿ ಪಠ್ಯದಲ್ಲಿಲ್ಲದಿದ್ದರೂ ಕೃತಕ ಬುದ್ಧಿಮತ್ತೆಯ ವಿಷಯವನ್ನು ಅತಿಥಿ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗೆ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥ ಡಾ. ಎಸ್.ಎಚ್. ಸುಜಿತ್ ಕುಮಾರ, ಅಧ್ಯಾಪಕರಾದ ಡಾ.ಶ್ರುತಿ ಮಾಕನೂರು, ಡಾ. ಪ್ರಕಾಶ್ ಅಳಲಗೇರಿ, ಕೆ.ವಿಜಯ್, ಡಾ.ಚೈತ್ರಾ, ಸರೋಜಾ, ವನಿತಾ ಪಾಟೀಲ್, ರಾಯ್ಕರ್ ಇತರರು ಭಾಗವಹಿಸಿದ್ದರು. ಭಾವನಾ ಪ್ರಾರ್ಥಿಸಿದರೆ, ಪ್ರಿಯಾ ದಿವಾಕರ್ ಹಾಗೂ ಅಯೇಷಾ ಸಿದ್ದಿಕಾ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳ ಪರಿಚಯವನ್ನು ಅನುಷಾ, ಧನು, ಅಮೂಲ್ಯ, ನಿವೇದಿತಾ ಮಾಡಿದರು. ಆಕ್ಟಾಗನ್ 2024ರ ಪಾರಿತೋಷಕಗಳನ್ನು ಅಧ್ಯಕ್ಷರು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. .......

-20ಕೆಡಿವಿಜಿ36:

ದಾವಣಗೆರೆಯ ಎಂಬಿಎ ಕಾಲೇಜಿನಲ್ಲಿ ನಡೆದ ಆಕ್ಟಾಗನ್ 2024 ಕಾರ್ಯಕ್ರಮವನ್ನು ಸಿ.ವಿ.ಗೌಡರ್ ಉದ್ಘಾಟಿಸಿದರು.