ಕನ್ನಡಪ್ರಭ ವಾರ್ತೆ ಬೆಂಗಳೂರು:
ಗ್ಯಾರಂಟಿಯಿಂದ ಆರ್ಥಿಕ ಪೆಟ್ಟು ಬಿದ್ದಿದೆ. ಹೀಗಾಗಿ, ಒಂದೊಂದೇ ನೆಪಗಳನ್ನು ಒಡ್ಡಿ ಈಗ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆಯನ್ನು ಲಕ್ಷ ಲಕ್ಷದಷ್ಟು ಇಳಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪಾದಿಸಿದ್ದಾರೆ.ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಅರ್ಹರಿದ್ದಾರೋ ಅವರಿಗೆ ಕೊಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಗ್ಯಾರಂಟಿ ಕೊಡುವಾಗ ಅರ್ಹತೆ, ಅನರ್ಹತೆಯನ್ನು ಯಾಕೆ ಯೋಚಿಸಲಿಲ್ಲ. ಗ್ಯಾರಂಟಿಯಿಂದ ಕ್ಷೇತ್ರದ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಶಾಸಕರಾದ ದೇಶಪಾಂಡೆ ಹೇಳುತ್ತಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಆಗದೇ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿ ಇದೆ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಯ ರಾಯರೆಡ್ಡಿ ಅವರೂ ಗ್ಯಾರಂಟಿಗಳಿಂದ ಸಂಕಷ್ಟ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದರು.
ಈ ಎಲ್ಲಾ ವಾಸ್ತವ ಸತ್ಯ ಮರೆಮಾಚಿ ಲಕ್ಷ ಲಕ್ಷ ಅನರ್ಹ ಫಲಾನುಭವಿಗಳಿಗೆ ಚುನಾವಣೆ ವೇಳೆ ಗ್ಯಾರಂಟಿ ಕೊಟ್ಟರು. ಆಗ ಹೇಳಿದ್ದು ಒಂದು; ಈಗ ಹೇಳೋದು ಒಂದು. ಚುನಾವಣೆ ಮೊದಲು ಅರ್ಹರಾದವರು ಚುನಾವಣೆ ಆದ ನಂತರ ಅನರ್ಹ ಎಂದು ಹೇಳುವುದು ಜನರಿಗೆ ಮಾಡಿದ ಅಪಮಾನ. ಇದು ಸರಿ ಅಲ್ಲ ಎಂದು ತಿಳಿಸಿದರು.ಗೃಹಲಕ್ಷ್ಮಿಯ 5 ಸಾವಿರ ಕೋಟಿ ಏನಾಯ್ತು?: ಎಚ್ಡಿಕೆ ಪ್ರಶ್ನೆ
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಕರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ‘ಎರಡೂ ಯೋಜನೆಗಳಲ್ಲಿರುವ ಲೋಪಗಳನ್ನು ಸರಿಪಡಿಸಲು ಮುಂದಾಗಿದ್ದಾರೆ. ಯೋಜನೆಗಳನ್ನು ಜಾರಿಗೊಳಿಸುವ ಸಮಯದಲ್ಲೇ ಇದನ್ನು ಆಲೋಚಿಸಬೇಕಿತ್ತು. ಆಗ ಮುಂದಾಗುವ ಅನಾಹುತದ ಯೋಚನೆ ಮಾಡಲಿಲ್ಲ. ಈಗ ಅನುಭವವಾಗಿದೆ. ಹೊಡೆತದ ಮೇಲೆ ಹೊಡೆತ ಬಿದ್ದ ನಂತರ ಎಚ್ಚೆತ್ತುಕೊಂಡು ಪರಿಷ್ಕರಣೆಗೆ ಇಳಿದಿದ್ದಾರೆ ಎಂದು ಕುಟುಕಿದರು.
ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ನೀಡದಿರುವ ಬಗ್ಗೆ ಸರ್ಕಾರ ಜಾಣಮೌನ ತಳೆದಿದೆ. ಈ ಬಗ್ಗೆ ಮಾತನಾಡುತ್ತಿಲ್ಲ. ಇದಕ್ಕೆ ಸಂಬಂಧಿಸಿದ 5000 ಕೋಟಿ ರು.ಏನಾಯಿತು?, ಎಲ್ಲಿಗೆ ಹೋಯಿತು? ಎಂಬುದಕ್ಕೆ ಯಾರೂ ಉತ್ತರ ನೀಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.